ಕಾಸರಗೋಡು, ಡಿ. 29(DaijiworldNews/HR): ಕೊರೊನಾ ಸೋಂಕು ಪ್ರಮಾಣ ಇಳಿಕೆಯಾಗಿದ್ದರೂ ನಿರ್ಲಕ್ಷಿಸುವಂತಿಲ್ಲ. ಮುನ್ನೆಚ್ಚರಿಗೆ, ಜಾಗ್ರತೆ ಅಗತ್ಯ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಹೇಳಿದ್ದಾರೆ.
ಕಾಸರಗೋಡಿನಲ್ಲಿ ಆರೋಗ್ಯ ಇಲಾಖಾ ಅವಲೋಕನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾಸ್ಕ್, ಸಾನಿಟೈಸರ್ ಬಳಕೆಯನ್ನು ಮುಂದಿನ ದಿನಗಳಲ್ಲೂ ಬಳಸಬೇಕು. ಸಭೆ, ಸಮಾರಂಭಗಳಿಗೆ ಕಡಿವಾಣ ಹಾಕಬೇಕು. ಜನ ಸೇರುವ ಕಾರ್ಯಕ್ರಮಗನ್ನು ಕೊರೊನಾ ಮಾನದಂಡದಂತೆ ನಡೆಸಬೇಕು" ಎಂದರು.
ಇನ್ನು "ರಾಜ್ಯದಲ್ಲಿ ಆರಂಭದಿಂದಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡ ಹಿನ್ನಲೆಯಲ್ಲಿ ಸಾವಿರಾರು ಮಂದಿಯ ಜೀವ ಉಳಿಸಲು ಸಾಧ್ಯವಾಗಿದೆ. ಈಗ ಕೊರೊನಾದ ಹೊಸ ರೂಪ ಕೆಲ ದೇಶಗಳಲ್ಲಿ ಕಂಡುಬಂದ ಹಿನ್ನಲೆಯಲ್ಲಿ ರಾಜ್ಯದಲ್ಲಿ ನಿಗಾ ಹಾಗೂ ಮುನ್ನೆಚ್ಚರಿಕೆ ವಹಿಸಲಾಗಿದೆ. ಇದರಿಂದ ಬ್ರಿಟನ್ ಹಾಗೂ ದೇಶಗಳಿಂದ ಆಗಮಿಸುವವರ ತಪಾಸಣೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ.