ಬೆಳ್ತಂಗಡಿ, ಡಿ.23 (DaijiworldNews/MB) : ವಿಶ್ವ ಹಿಂದೂ ಪರಿಷತ್ ನಾಯಕ ನೂಜೆ ತುಕ್ರಪ್ಪ ಶೆಟ್ಟಿ ಅವರ ನಿವಾಸದಲ್ಲಿ ನಡೆದ ದರೋಡೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಸುಮಾರು 400 ಗ್ರಾಂ ಮತ್ತು 1,50,000 ರೂ.ಗಳ ನಗದು ಚಿನ್ನದ ಆಭರಣಗಳನ್ನು ದೋಚಿರುವ ದರೋಡೆಕೋರರು ತುಕ್ರಪ್ಪ ಶೆಟ್ಟಿಯವರನ್ನು ಕಟ್ಟಿಹಾಕಿದ್ದಲ್ಲದೆ ಅವರ ಪತ್ನಿಗೆ ಚೂರಿಯಿಂದ ಇರಿದಿದ್ದರು.
ದರೋಡೆಕೋರರು ಮುಖವನ್ನು ಬಟ್ಟೆಯಿಂದ ಮುಚ್ಚಿದ್ದರು. ಅವರು ಸುಮಾರು 25 ರಿಂದ 30 ವರ್ಷ ವಯಸ್ಸಿನವರಾಗಿರಬಹುದು ಅಂದಾಜಿಸಲಾಗಿದೆ. ದರೋಡೆಕೋರರು ದೋಚಿದ ಬಳಿಕ ಮನೆಯಿಂದ ವಾಪಾಸ್ ತೆರಳುವಾಗ ಓರ್ವ ದರೋಡೆಕೋರ ತುಕ್ರಪ್ಪ ಶೆಟ್ಟಿಯವರ ಮಗುವನ್ನು ಎತ್ತಲು ಹೋಗಿದ್ದು ಆ ಸಂದರ್ಭ ಆತನ ಮುಖಕ್ಕೆ ಮುಚ್ಚಿದ್ದ ಬಟ್ಟೆ ಭಾಗಶಃ ಕೆಳಕ್ಕೆ ಜಾರಿದ್ದು ಆತನ ಮುಖದಲ್ಲಿ ಬಾತು ಇರುವುದು ಕುಟುಂಬ ಸದಸ್ಯರು ಗಮನಿಸಿದ್ದಾರೆ ಎಂದು ವರದಿಯಾಗಿದೆ.
ತುಕ್ರಪ್ಪ ಶೆಟ್ಟಿಯವರು ಮನೆ ಬಾಗಿಲು ತೆರೆಯುವ ಮೊದಲು ಕೋವಿ ಹಿಡಿಯುತ್ತಿದ್ದರು. ಆದರೆ, ಚುನಾವಣಾ ನಿಯಮಗಳ ಪ್ರಕಾರ ಬಂದೂಕುಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಟ್ಟಿರುವುದರಿಂದ, ದರೋಡೆಕೋರರು ಬಂದಾಗ ಕೋವಿ ಮನೆಯಲ್ಲಿ ಇರಲಿಲ್ಲ. ಇದು ದರೋಡೆಕೋರರಿಗೆ ವರವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ. ಇನ್ನು ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಯಾವುದೇ ಅಪರಾಧ ಪ್ರಕರಣಗಳು ಹೊಂದಿರದ ಕೃಷಿಕರು ತಮ್ಮ ಬಳಿ ಕೋವಿಯನ್ನು ಉಳಿಸಿಕೊಳ್ಳಲು ಅವಕಾಶ ನೀಡಲು ಒತ್ತಾಯ ಮಾಡಿದ್ದರು ಎಂಬುದನ್ನು ನಾವು ಈ ಸಂದರ್ಭ ನೆನಪಿಸಿಕೊಳ್ಳಬಹುದು.
ಇನ್ನು ಶೆಟ್ಟಿಯವರ ಮಗಳು ತಮ್ಮ ರಕ್ಷಣೆಗಾಗಿ ಕೂಗಿದಾಗ ದರೋಡೆಕೋರರು ಕನ್ನಡ ತುಳು ಮಿಶ್ರ ಮಾಡಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ.
ಇನ್ನು ತುಕ್ರಪ್ಪ ಶೆಟ್ಟಿಯವರ ಪತ್ನಿ ಗೀತಾ ಶೆಟ್ಟಿಯವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ವ್ಯಕ್ತಿಯು ತಾನು ದರೋಡೆ ನಡೆಸಿ ಹೊರಡುವಾಗ ಗೀತಾ ಶೆಟ್ಟಿಯವರಿಗೆ ನೀರು ಕುಡಿಸಿದ್ದಾನೆ. ಹಾಗೆಯೇ ನಾವು ಹೋದ ಬಳಿಕ ಆಂಬುಲೆನ್ಸ್ ತರಿಸಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿ ಪಾದ ಮುಟ್ಟಿ ನಮಸ್ಕರಿಸಿದ್ದಾನೆ ಎಂದು ವರದಿ ತಿಳಿಸಿದೆ. ಶೆಟ್ಟಿಯವರು ಹಲವರಿಗೆ ಸಹಾಯ ಮಾಡಿರುವ ಹಿನ್ನೆಲೆ ಈ ಕೃತ್ಯ ಎಸಗಿದರವರು ಈ ಹಿಂದೆ ಶೆಟ್ಟಿಯವರ ಸಹಾಯ ಪಡೆದವರು ಆಗಿರಬಹುದೇ ಎಂದು ದರೋಡೆಕಾರರ ಈ ವರ್ತನೆಯಿಂದಾಗಿ ಅನುಮಾನ ವ್ಯಕ್ತವಾಗಿದೆ.