ಬೆಳ್ತಂಗಡಿ, ಡಿ.20 (DaijiworldNews/MB) : ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡದಲ್ಲಿ ದೇವಾಲಯವೊಂದರಲ್ಲಿ ಪ್ರಕೃತಿಯನ್ನು ಆರಾಧಿಸಲಾಗುತ್ತದೆ. ಇಲ್ಲಿಗೆ ಸಮೀಪವಿರುವ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ 'ಕೋರಿ ಜಾತ್ರೆ' ಉತ್ಸವದಲ್ಲಿ, ಹರಕೆಯಾಗಿ 'ವೈದ್ಯರ ವೈದ್ಯರು' ಎಂದು ಪರಿಗಣಿಸಲ್ಪಟ್ಟಿರುವ ವೈದ್ಯನಾಥೇಶ್ವರ ದೇವರಿಗೆ ಹಸಿರು ಹುಲ್ಲು ಅರ್ಪಿಸಲಾಗುತ್ತದೆ. ಈ ಪ್ರದೇಶದ ಭಕ್ತರು, ಹೆಚ್ಚಿನವರು ಕೃಷಿಕರು, ವೈದ್ಯನಾಥೇಶ್ವರ ದೇವರಿಗೆ ಹಸಿರು ಹುಲ್ಲು ಅರ್ಪಿಸುವುದರಿಂದ ಎಲ್ಲಾ ರೋಗಗಳು ಗುಣವಾಗುತ್ತವೆ ಎಂದು ದೃಢವಾದ ನಂಬಿಕೆ ಹೊಂದಿದ್ದಾರೆ. ವಾರ್ಷಿಕ ದೇವಾಲಯ ಉತ್ಸವದಲ್ಲಿ ಭಕ್ತರು ಭತ್ತದ ಗದ್ದೆಯಲ್ಲಿ ಹುಲ್ಲು ಹಾಕಿ ತಮ್ಮ ತಮ್ಮ ಹರಕೆಯನ್ನು ತೀರಿಸುತ್ತಾರೆ.
ಕೋರಿ ಜಾತ್ರೆಯ ದಿನ ಪುರುಷರು, ಮಹಿಳೆಯರು ಮತ್ತು ಮಕ್ಕಳು ಹಸಿರು ಹುಲ್ಲನ್ನು ದೇವಸ್ಥಾನಕ್ಕೆ ಕೊಂಡೊಯ್ಯುತ್ತಾರೆ. ವೈದ್ಯನಾಥೇಶ್ವರ ದೇವರೇ ಈ ಪ್ರದೇಶದ ಜನರಿಗೆ ಮತ್ತು ಅವರ ಜಾನುವಾರುಗಳಿಗೆ ದೈವಿಕ ವೈದ್ಯರಾಗಿದ್ದಾರೆ. ಯಾವುದೇ ವ್ಯಕ್ತಿ ಅಥವಾ ದನಗಳು ಅನಾರೋಗ್ಯಕ್ಕೆ ಒಳಗಾದಾಗ ಅವರು ದೇವಾಲಯದ ಆಡಳಿತದ ಮಂಡಳಿಯ ಒಡೆತನದ ಭತ್ತದ ಗದ್ದೆಗೆ ಹಸಿರು ಹುಲ್ಲು ಅರ್ಪಿಸುತ್ತಾರೆ. ಇದೇ ಗದ್ದೆಗೆ ಜಾನುವಾರುಗಳನ್ನು ಕರೆ ತರಲಾಗುತ್ತದೆ. ಈ ಮೂಲಕ ಜಾನುವಾರುಗಳಿಗೆ ಇರುವ ರೋಗ ಗುಣಮುಖವಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಭಕ್ತರು ಹಸಿರು ಹುಲ್ಲನ್ನು ಹರಕೆಯಾಗಿ ಅರ್ಪಿಸಿದರೆ, ಅವರಿಗೆ ಭತ್ತದ ಗದ್ದೆಯ ನೀರು ಮತ್ತು ಮಣ್ಣನ್ನು ಪ್ರಸಾದ ಎಂದು ನೀಡಲಾಗುತ್ತದೆ. ಈ ಪವಿತ್ರ ಸ್ಥಳದ ಶಕ್ತಿಯನ್ನು ತಿಳಿದಿರುವ ಕಾರಣ ದೂರದ ಸ್ಥಳಗಳ ಜನರು ತಮ್ಮ ಹರಕೆ ತೀರಿಸಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ರೋಗವು ಸಂಪೂರ್ಣವಾಗಿ ಗುಣವಾದ ನಂತರ, ಅವರು ದೇವಾಲಯಕ್ಕೆ ಭೇಟಿ ನೀಡಿ, ಹಸಿರು ಹುಲ್ಲು ನೀಡುತ್ತಾರೆ.