ಕಾರ್ಕಳ, ಡಿ.20 (DaijiworldNews/MB) : ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಇತ್ತಂಡ ನಡುವೆ ಹೊಡೆದಾಟ ನಡೆದಿದೆ.
ಸಾಂದರ್ಭಿಕ ಚಿತ್ರ
ಶನಿವಾರ ಬೆಳಿಗ್ಗೆ 11.00ಗಂಟಗೆ ಹೊತ್ತಿಗೆ ಕೌಡೂರು ಕೋಟೆಬಾಗಿಲು ನಿಖಿಲ್ ರಾಣೆ, ಮಹಾವೀರ ರಾಣೆಯೊಂದಿಗೆ ರಾಜೇಶ್ ಎಂಬುವವರ ಆಟೋರಿಕ್ಷಾದಲ್ಲಿ ಎರ್ಲಪಾಡಿ ಗ್ರಾಮದ ಕುಂಟಲ್ಪಾಡಿ ಎಂಬಲ್ಲಿಗೆ ತಲುಪುವಾಗ ಬೈಲೂರು ಕಡೆಯಿಂದ ಫ್ಯಾಶನ್ ಪ್ರೋ ಮೋಟಾರ್ ಸೈಕಲ್ನಲ್ಲಿ ಸಂತೋಷ ರಾಣೆ, ಸಂದೇಶ್ ರಾಣೆ, ಸುದೀಪ್ ರಾಣೆ ಅಲಿಯಾಸ್ ಗುಂಡು ರವರು ಹಾಗೂ ಕೆಎ20ಡಿ 9280 ನೇ ಆಟೋರಿಕ್ಷಾದಲ್ಲಿ ಆಪಾದಿತರಾದ ಪ್ರದೀಪ್ ಅಲಿಯಾಸ್ ಅಣ್ಣಿ, ಶಶಿಕಾಂತ, ಸುರೇಂದ್ರ ಆಲಿಯಾಸ್ ಸುರಿ ಆಲಿಯಾಸ್ ಗೊಂಟು, ಪ್ರಸನ್ನ ಅಲಿಯಾಸ್ ಪಚ್ಚು ಮತ್ತು ಶಿವಪ್ರಸಾದ್ ಅಲಿಯಾಸ್ ಕಟ್ಟಾರವರು ಬಂದು ಸಮಾನ ದುರುದ್ದೇಶದಿಂದ ಅಕ್ರಮ ಕೂಟ ಸೇರಿ ಕೊಂಡು ರಾಜೇಶನು ಚಲಾಯಿಸಿಕೊಂಡಿದ್ದ ರಿಕ್ಷಾಕ್ಕೆ ಅಡ್ಡಲಾಗಿ ಬೈಕ್ನ್ನು ಇಟ್ಟು ತಡೆದು ನಿಲ್ಲಿಸಿದ್ದಾರೆ.
ಸಂತೋಷ ರಾಣೆಯು ರಿಕ್ಷಾ ಚಾಲಕ ರಾಜೇಶನ ಕಾಲರ್ ಹಿಡಿದು ರಿಕ್ಷಾದಿಂದ ಹೊರಗೆ ಎಳೆದು ಬಿ.ಜೆ.ಪಿ ಪಕ್ಷದ ಶಾಲಿನಿಗೆ ಬೆಂಬಲ ನೀಡಬಾರದು ಅವರಿಂದ ನಾಮೀನೇಶನ್ ವಾಪಾಸ್ಸು ತೆಗೆದುಕೊಳ್ಳಬೇಕು ಎಂದು ಬೆದರಿಕೆಯೊಡ್ಡಿದ್ದಾನೆ.
ಆಪಾದಿತರಾದ ಸಂತೋಷ ಮತ್ತು ಸಂದೇಶ ಇವರು ನಿಖಿಲ್ ರಾಣೆಯನ್ನು ರಿಕ್ಷಾದಿಂದ ಎಳೆದು ಸಂತೋಷನು ಎಡಕೆನ್ನೆಗೆ ಕೈಯಿಂದ ಹೊಡೆದುದಲ್ಲದೇ ಸಂದೇಶನು ಬೆನ್ನಿಗೆ ತುಳಿದು ಬೆನ್ನಿಗೆ ಹೊಡೆದಿದ್ದಾರೆ.
ಅದೇ ಸಮಯ ಸಂತೋಷ ರಾಣೆಯೂ ಇನ್ನೂ ಮುಂದಕ್ಕೆ ನೀವು ರಾಣೆಕೇರಿಗೆ ಪ್ರಚಾರಕ್ಕೆ ಬಂದರೆ ಕೈಕಾಲು ಕಡಿದು ಹಾಕಿ ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಗಾಯಾಳುಗಳು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಇವರೆಲ್ಲರೂ ಬಿಜೆಪಿ ಕಾರ್ಯಕರ್ತರಾಗಿದ್ದು, ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಒಂದು ಗುಂಪು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಿರುವುದು ಘಟನೆಗೆ ಕಾರಣವಾಗಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.