ಮಂಗಳೂರು, ಡಿ.19 (DaijiworldNews/MB) : ಸಿಎಎ ವಿರೋಧಿ ಪ್ರತಿಭಟನೆ ವೇಳೆ ''ಮಂಗಳೂರು ಗೋಲಿಬಾರ್'' ಪ್ರಕರಣಕ್ಕೆ ಶನಿವಾರ ಒಂದು ವರ್ಷವಾಗಿದ್ದು ಈ ಹಿನ್ನೆಲೆ ನಗರದಾದ್ಯಂತ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಕಳೆದ ವರ್ಷ ದೇಶದಾದ್ಯಂತ ಸಿಎಎ ವಿರುದ್ದ ಪ್ರತಿಭಟನೆ ನಡೆಯುತ್ತಲ್ಲೇ ಇದ್ದ ಸಂದರ್ಭದಲ್ಲಿ 2019 ರ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ಯುವಕರು ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಸಂಘರ್ಷ ಉಂಟಾಗಿದ್ದು ಇಬ್ಬರು ಪೊಲೀಸ್ ಗುಂಡಿಗೆ ಬಲಿಯಾದರೆ, ಎಂಟು ಮಂದಿ ಗಾಯಗೊಂಡಿದ್ದರು. ಗೋಲಿಬಾರ್ ನಲ್ಲಿ ನೌಶೀನ್ ಮತ್ತು ಜಲೀಲ್ ಕುದ್ರೋಳಿ ಮೃತಪಟ್ಟವರು. ಅಷ್ಟೇ ಅಲ್ಲದೇ ಲಾಠಿ ಚಾರ್ಚ್ ವೇಳೆ 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಈ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಗಲಭೆ ನಡೆದ ಸ್ಟೇಟ್ ಬ್ಯಾಂಕ್ ಮತ್ತು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭದ್ರತೆ ಮಾಡಲಾಗಿದೆ. ಕೆಎಸ್ಆರ್ಪಿ ತುಕಡಿ ಸೇರಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಇನ್ನು ಈ ಗೋಲಿಬಾರ್ ಪ್ರಕರಣದ ಬಗ್ಗೆ ಸದ್ಯ ಮ್ಯಾಜಿಸ್ಟ್ರೇಟ್ ತನಿಖೆ ಮತ್ತು ಸಿಐಡಿಯಿಂದ ತನಿಖೆ ನಡೆಯುತ್ತಿದೆ.