ಉಡುಪಿ, ಡಿ.16 (DaijiworldNews/PY): "ಗೂಂಡಾ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕಾಂಗ್ರೆಸ್ ಸಾಮ್ರಾಜ್ಯ ವಿಧಾನ ಪರಿಷತ್ನಲ್ಲಿ ಗೌರವಾನ್ವಿತ ಉಪಸಭಾಪತಿಯವರನ್ನು ಪೀಠದಿಂದ ಎಳೆದಾಡಿದ ಫಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರವಾಗಿದೆ. ಕಾಂಗ್ರೆಸ್ ನಾಯಕರ ವ್ಯಕ್ತಿತ್ವವನ್ನು ಬಿಂಬಿಸುವ ಇಂತಹ ಅನಾಗರಿಕ ಗೂಂಡಾಗಿರಿ ವರ್ತನೆ ಕಾಂಗ್ರೆಸ್ ಅಧಃಪತನಕ್ಕೆ ನಾಂದಿ ಹಾಡಲಿದೆ" ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
"ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿಯುತ್ತಿದ್ದ ಕಾಂಗ್ರೆಸ್ ನಾಯಕರು ಸ್ವತಃ ಮೇಲ್ಮನೆ ಉಪಸಭಾಪತಿಯ ಸಾಂವಿಧಾನಿಕ ಹುದ್ದೆಗೆ ಅಪಮಾನಗೈದಿದ್ದಾರೆ. ಕಾಂಗ್ರೆಸಿನ ವಿಧಾನ ಪರಿಷತ್ ಸದಸ್ಯರ ಇಂತಹ ಕೀಳು ಮನಸ್ಥಿತಿಯ ಹೇಯ ವರ್ತನೆ ಸಹಿಸಲಸಾಧ್ಯ. ಸರಕಾರ ತಕ್ಷಣ ತಪ್ಪಿತಸ್ಥರ ಮೇಲೆ ಕಾನೂನು ರೀತಿಯ ಸೂಕ್ತ ಶಿಸ್ತುಕ್ರಮ ಕೈಗೊಳ್ಳಬೇಕು" ಎಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
"ಸದಾ ದೇಶ ವಿರೋಧಿನೀತಿ ಮತ್ತು ಅಪಪ್ರಚಾರವನ್ನೇ ಬಂಡವಾಳವನ್ನಾಗಿಸಿರುವ ಕಾಂಗ್ರೆಸ್ ದಿನೇ ದಿನೇ ದೇಶಾದ್ಯಂತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ವಾಸ್ತವ. ದೇಶದ ಮುಂದೆ ರಾಜ್ಯದ ಮಾನ ಹರಾಜು ಹಾಕಿರುವ ಕಾಂಗ್ರೆಸ್ನ ಗೂಂಡಾಗಿರಿ ವರ್ತನೆಗೆ ರಾಜ್ಯದ ಜನತೆ ಮುಂಬರಲಿರುವ ಗ್ರಾಮ ಪಂಚಾಯತ್ ಸಹಿತ ಎಲ್ಲಾ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಕುಯಿಲಾಡಿ ಹೇಳಿದ್ದಾರೆ.