ಮಂಗಳೂರು, ಡಿ.16 (DaijiworldNews/PY): "ಯಾವುದೇ ಆಡಳಿತ ಸರ್ಕಾರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಧ್ಯಪ್ರವೇಶಿಸುವುದನ್ನು ನಾವು ನೋಡಿಲ್ಲ. ಗ್ರಾ.ಪಂ ಗ್ರಾಮ ಪಂಚಾಯತ್ ಚುನಾವಣೆಗಾಗಿ ಬಿಜೆಪಿ ಸರ್ಕಾರ ಹೆಚ್ಚಿನ ಮೀಸಲಾತಿ ತೋರಿಸಿದೆ. ತಮ್ಮ ಆಡಳಿತದ ಅವಧಿಯಲ್ಲಿ ಗ್ರಾ ಪಂ.ಗಳ ಮೀಸಲಾತಿಗೆ ಕಾಂಗ್ರೆಸ್ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿರುವಾಗ ಪಂಚಾಯತ್ ಕಾಯ್ದೆ ತಿದ್ದುಪಡಿ ಮಾಡಲು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ರಾಜೀವ್ ಗಾಂಧಿಯವರ ಅವಧಿಯಲ್ಲಿ ಪಂಚಾಯತ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದರಿಂದ ಮಾತ್ರ ಗ್ರಾಮಗಳು ಅಭಿವೃದ್ಧಿಗೊಂಡಿವೆ" ಎಂದು ಮಾಜಿ ಸಚಿವ ರಮನಾಥ್ ರೈ ಹೇಳಿದರು.
ಬುಧವಾರ ನಗರದಲ್ಲಿ ಮಾತನಾಡಿದ ಅವರು, "ಕಳೆದ ಮೂರು ವರ್ಷಗಳಿಂದ ಬಡವರಿಗೆ ಮನೆ ದೊರಕಿಲ್ಲ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಸಮಾಜದ ಬಡ ವರ್ಗಗಳಿಗೆ ಹೆಚ್ಚುವರಿ ಮನೆಗಳನ್ನು ನೀಡಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಲವಾರು ಯೋಜನೆಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನೀಡಲಾದ ಬಿಪಿಎಲ್ ಕಾರ್ಡ್ಗಳನ್ಜು ರದ್ದುಗೊಳಿಸಲಾಗಿಲ್ಲ. ಆದರೆ, ಬಿಜೆಪಿ ಅವುಗಳನ್ನು ರದ್ದುಗೊಳಿಸುತ್ತಿದೆ. ಅಲ್ಲದೇ, ಸಾರ್ವಜನಿಕರಿಂದ ದಂಡವನ್ನೂ ಕೂಡಾ ಸಂಗ್ರಹ ಮಾಡುತ್ತಿದೆ" ಎಂದು ಆರೋಪಿಸಿದರು.
ಗ್ರಾ.ಪಂ.ಚುನಾವಣೆಯ ವಿಚಾರವಾಗಿ ಮಾತನಾಡಿದ ಅವರು, "ಕೊರೊನಾ ಕಾರಣದಿಂದ ನಿಗದಿತ ಸಮಯಕ್ಕೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಪಂಚಾಯತ್ ಚುನಾವಣೆ ಎನ್ನುವುದು ಪಕ್ಷರಹಿತವಾದ ಚುನಾವಣೆ. ಆದರೆ, ಚುನಾವಣೆ ಮೀಸಲಾತಿ ಪಟ್ಟಿಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದೆ. ಶಾಸಕರ ಮನೋ ಇಚ್ಛೆಯ ಪ್ರಕಾರವಾಗಿ ಮೀಸಲಾತಿ ಪಟ್ಟಿ ಸಿದ್ಧವಾಗಿದೆ" ಎಂದರು.
"ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅನೇಕ ಕಾರ್ಯಕ್ರಮಗಳು ರದ್ದಾಗಿವೆ. ಸರಿಯಾಗಿ ಸರ್ಕಾರ ಬಡವರಿಗೆ ಮಾಸಾಶನ ನೀಡುತ್ತಿಲ್ಲ. ಬಿಜೆಪಿ ಸರ್ಕಾರವನ್ನು ದರಿದ್ರ ಸರ್ಕಾರ ಎಂದರೆ ತಪ್ಪಾಗಲಾರದು" ಎಂದು ಹೇಳಿದರು.
ವಿಧಾನ ಪರಿಷತ್ನಲ್ಲಿ ನಡೆದ ಗದ್ದಲ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಭಾಪತಿಯನ್ನು ಸದನಕ್ಕೆ ಬರದೇ ಬಾಗಿಲು ಹಾಕಿದವರು ಯಾರು?. ಸದನದಲ್ಲಿ ಗಲಾಟೆ ಎರಡು ಕಡೆಯವರಿಂದಲೂ ನಡೆದಿದೆ. ಗಲಾಟೆಯ ಮೂಲ ಕಾರಣ ಎಲ್ಲಿಂದ ಶುರುವಾಯಿತು ಎನ್ನುವುದನ್ನು ತಿಳಿಯಬೇಕು" ಎಂದರು.