ಉಡುಪಿ, ಡಿ.14 (DaijiworldNews/MB) : ''ರಾಜ್ಯ ಬಸ್ ಮಾಲಕರ ಸಂಘದ ಖಜಾಂಚಿಗಳು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ರವರು ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದು ಜನ ಸಾಮಾನ್ಯರ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವುದು ಸ್ವಾಗತಾರ್ಹ. ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸುವಂತೆ ಕುಯಿಲಾಡಿಯವರೆ ಸರ್ಕಾರವನ್ನು ಒತ್ತಾಯಿಸಲಿ'' ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ಸಾರಿಗೆ ನೌಕರರು ತಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಬೇಡಿಕೆ ಮಂಡಿಸಿದರೂ ಸರಕಾರ ಸ್ಪಂದಿಸದೆ ಇನ್ನೂ ಮಾತುಕತೆಯಲ್ಲಿ ಕಾಲಹರಣ ಮಾಡುತ್ತಿದೆ. ಇದಕ್ಕೆ ಯಾರು ಹೊಣೆ ಎಂಬುದನ್ನು ಕುಯಿಲಾಡಿಯವರು ಹೇಳಬೇಕು'' ಎಂದಿದ್ದಾರೆ.
''ಇದನ್ನೇ ನೆಪವಾಗಿರಿಸಿಕೊಂಡು ಕುಯಿಲಾಡಿಯವರು ಖಾಸಗಿ ಪ್ರವರ್ತಕರಿಗೆ ರಾಜ್ಯದಲ್ಲಿ ಬಸ್ ಓಡಿಸಲು ಅನುವು ಮಾಡಿಕೊಡಬೇಕಂಬ ಬೇಡಿಕೆ ಇಟ್ಟಿರುವುದನ್ನು ನೋಡಿದರೆ ಬಿಜೆಪಿ ಜಿಲ್ಲಾಧ್ಯಕ್ಷರು ಖಾಸಗಿ ಪ್ರವರ್ತಕರ ಬೆಂಬಲಕ್ಕೆ ನಿಂತಿರುವುದು ಕಂಡುಬರುತ್ತದೆ. ಖಾಸಗಿ ಪ್ರವರ್ತಕರಿಗೆ ರಾಜ್ಯದಲ್ಲಿ ಬಸ್ಸು ಓಡಿಸಲು ಅನುವು ಮಾಡಿಕೊಟ್ಟರೆ ತೆರಿಗೆ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಹಣ ಸರಕಾರದ ಬೊಕ್ಕಸಕ್ಕೆ ಸೇರುತ್ತದೆ ಎನ್ನುವ ಕುಯಿಲಾಡಿಯವರ ಹೇಳಿಕೆಯು ಈಗಾಗಲೇ ಇರುವ ಸಾರಿಗೆ ನೌಕರರನ್ನು ಬೀದಿಗೆ ತಳ್ಳುವ ಹುನ್ನಾರವಾಗಿದೆ'' ಎಂದು ದೂರಿದ್ದಾರೆ.
''ಖಾಸಗಿಯವರಿಗೆ ಬಸ್ ಪರವಾನಿಗೆ ನೀಡಿದಲ್ಲಿ ಪ್ರಯಾಣ ಕರಿಗೆ ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಸೇವೆ ಸಿಗುತ್ತದೆ ಎನ್ನುವ ಕುಯಿಲಾಡಿಯವರ ಹೇಳಿಕೆ ಜನತೆಯ ಹಾದಿ ತಪ್ಪಿಸುವಂತಿದೆ. ಸರಕಾರಿ ಸಾರಿಗೆಗಿಂತಲೂ ದುಪ್ಪಟ್ಟು ಪ್ರಯಾಣ ದರವನ್ನು ಖಾಸಗಿಯವರು ವಸೂಲು ಮಾಡುವಾಗ ಇವರ ಸ್ಪರ್ಧಾತ್ಮಕ ದರ ಹೇಳಿಕೆ ಎಷ್ಟು ಸಮಂಜಸ. ಈಗಾಗಲೇ ಸಾರಿಗೆ ಮುಷ್ಕರದ ದುರ್ಲಾಭ ಪಡೆದು ಖಾಸಗಿ ಬಸ್ಗಳು ಪ್ರಯಾಣ ಕರನ್ನು ಸುಲಿಗೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ಸೋತಿದೆ'' ಎಂದು ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.