ಉಡುಪಿ, ಡಿ.14(DaijiworldNews/HR): ರಾಜ್ಯದ ಬಿಜೆಪಿ ಸರಕಾರ, ಸಿದ್ಧರಾಮಯ್ಯರವರ ಕಾಂಗ್ರೆಸ್ ಸರಕಾರ ಪ್ರಾರಂಭಿಸಿದ ಅನ್ನಭಾಗ್ಯ ಯೋಜನೆಯಲ್ಲಿ ಬಿ.ಪಿ.ಎಲ್. ರೇಶನ್ ಕಾರ್ಡ್ಗೆ ನೀಡುವ 10ಕೆ.ಜಿ. ಅಕ್ಕಿಯ ಪ್ರಮಾಣವನ್ನು 5 ಕ್ಕೆ ಇಳಿಸಿ ಜನರಿಗೆ ದ್ರೋಹವೆಸಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ ಹೇಳಿದ್ದಾರೆ.
ಈ ಕುರಿತು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಅಂಬಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕಿದಿಯೂರು -1 ಹಾಗೂ 2ನೇ ವಾರ್ಡಿನ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳಾದ ಗ್ಯಾಸ್, ಪೆಟ್ರೋಲ್, ಡಿಸೇಲ್ ದರವನ್ನು ಏಷ್ಯಾ ಖಂಡದಲ್ಲಿಯೇ ವಿಪರೀತ ಹೆಚ್ಚಳ ಮಾಡುವ ಮೂಲಕ ಜನರ ಜೀವನ ದುಸ್ತರವಾಗಿದೆ. ರಾಜ್ಯ ಬಿಜೆಪಿ ಸರಕಾರ ರೈತರಿಗೆ ಮರಣ ಶಾಸನವಾದ ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ.) ಕಾಯಿದೆ ತಿದ್ದುಪಡಿ, ಭೂ ಮಸೂದೆ ಕಾಯಿದೆ ತಿದ್ದುಪಡಿಯನ್ನು ಹಾಗೂ ಕಾರ್ಮಿಕ ಕಾಯಿದೆ ತಿದ್ದುಪಡಿ ಮಾಡುವ ಮಸೂದೆಗಳನ್ನು ತರಾತುರಿಯಲ್ಲಿ ಜಾರಿಗೊಳಿಸುವ ಮೂಲಕ ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮುಖಂಡ ನವೀನ್ ಕೋಟ್ಯಾನ್ರವರು ಮಾತನಾಡಿ, ಅಂಬಲ್ಪಾಡಿ ಪಂಚಾಯತ್ನ ಹಿಂದಿನ ಬಿಜೆಪಿ ಆಡಳಿತ ಸ್ಥಳೀಯವಾಗಿ ಕಸ ವಿಲೇವಾರಿ ಘಟಕ (ಎಸ್.ಎಲ್.ಆರ್) ಪ್ರಾರಂಭಿಸುವ ಮೂಲಕ ಕಿದಿಯೂರು ಭಾಗದ ನೆಲ, ಜಲ, ಕೃಷಿಯನ್ನು ಒಟ್ಟಾರೆ ಪರಿಸರಕ್ಕೆ ಮಾರಕವಾದ ಯೋಜನೆಯನ್ನು ಜಾರಿಗೊಳಿಸದಂತೆ ಜನರನ್ನು ಜಾಗೃತಗೊಳಿಸುವ ಅಗತ್ಯತೆಯನ್ನು ಹೇಳಿದರು.
ಸಭೆಯಲ್ಲಿ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್ ಹಾಗೂ ಐರಿನ್ ಎಲ್. ಅಂದ್ರಾದೆ, ವೀಕ್ಷಕರಾದ ನಗರಸಭಾ ಸದಸ್ಯ ವಿಜಯ ಪೂಜಾರಿ, ಸುರೇಂದ್ರ ಆಚಾರ್ಯ, ಸೋಶಿಯಲ್ ಮೀಡಿಯಾದ ಹಮದ್, ರಂಜನ್, ಸುರೇಂದ್ರ ಬಂಕೇರ್ಕಟ್ಟೆ ಕಿದಿಯೂರು 1 ಹಾಗೂ 2ನೇ ವಾರ್ಡಿನ ಅಭ್ಯರ್ಥಿಗಳಾದ ಸಾಯಿರಾಜ್ ಕೋಟ್ಯಾನ್, ಗೀತಾ ಸೇರಿಗಾರ್ತಿ, ಅಶೋಕ್ ಪೂಜಾರಿ, ದೀಕ್ಷಿತಾ, ಆಶಾ ಪೂಜಾರಿ, ಉಪಸ್ಥಿತರಿದ್ದರು.