ಮಂಗಳೂರು, ಡಿ.14 (DaijiworldNews/MB) : ''ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಜೊತೆ ನಿಂತು ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸುತ್ತಾರೆ'' ಎಂದು ಶಾಸಕ ಯು ಟಿ ಖಾದರ್ ಹೇಳಿದರು.
ಡಿಸೆಂಬರ್ 14 ರ ಸೋಮವಾರ ಇಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಯು ಟಿ ಖಾದರ್, ''ಬಿಜೆಪಿ ಸರಕಾರದ ಬಗ್ಗೆ ಜನ ಬೇಸತ್ತು ಹೋಗಿದ್ದಾರೆ. ಹಾಗಾಗಿ ಜನರು ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸುತ್ತಾರೆ'' ಎಂದರು
''ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಪಡಿತರ ಚೀಟಿ ವಿತರಿಸಿಲ್ಲ. ಯಾವುದೇ ಮನೆಗಳನ್ನು ಮಂಜೂರು ಮಾಡಿಲ್ಲ. ಶಾಲೆ ಮತ್ತು ಕಾಲೇಜುಗಳನ್ನು ಪುನಃ ತೆರೆಯುವ ಗೊಂದಲ ಇನ್ನೂ ಇದೆ. ರೈತ ವಿರೋಧಿ ನೀತಿ ಸೇರಿದಂತೆ ಹಲವು ನೀತಿಗಳು ಜನರ ಮೇಲೆ ತೀವ್ರ ಪರಿಣಾಮ ಬೀರಿದೆ. ಜನರು ಬಿಜೆಪಿಗೆ ಮತ ನೀಡುವಂತ ಯಾವ ಕಾರ್ಯವನ್ನು ಬಿಜೆಪಿ ಮಾಡಿದೆ'' ಎಂದು ಖಾದರ್ ಪ್ರಶ್ನಿಸಿದರು.
''ಸರ್ಕಾರದ ಯಾವುದೇ ಯೋಜನೆಗಳು ಜನರಿಗೆ ತಲುಪಿಲ್ಲ. ಹಾಗೆಯೇ ಸರ್ಕಾರ ಜನ ವಿರೋಧಿ ನೀತಿಗಳನ್ನು ಪರಿಚಯಿಸುತ್ತಿದ್ದಾರೆ. ಸರಕುಗಳು, ಪೆಟ್ರೋಲ್, ಡೀಸೆಲ್ ಮೇಲಿನ ಬೆಲೆ ಏರಿಕೆ ಜನರ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ಜನರು ಬಿಜೆಪಿ ಸರ್ಕಾರದ ವಿರುದ್ಧ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸ ನಮಗಿದೆ'' ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ''ಸರ್ಕಾರ ಆಡಳಿತವನ್ನು ದುರುಪಯೋಗಪಡಿಸಿಕೊಂಡಿದೆ. ಚುನಾವಣೆಗೆ ಮುನ್ನ ಮೀಸಲಾತಿ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದಿದೆ. ವಾರ್ಡ್ಗಳನ್ನು ಅವೈಜ್ಞಾನಿಕವಾಗಿ ವಿಂಗಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಬೆದರಿಸುವ, ಅಪಹರಿಸುವ ಕೆಲಸ ನಡೆಯುತ್ತಿದೆ. ಗೆಲ್ಲೋದಕ್ಕಾಗಿ ಬಿಜೆಪಿ ವಾಮ ಮಾರ್ಗ ಅನುಸರಿಸುತ್ತಿದೆ'' ಎಂದು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜಾ ಉಪಸ್ಥಿತರಿದ್ದರು.