ಬೆಳ್ತಂಗಡಿ, ಡಿ.14 (DaijiworldNews/MB) : ''ಜನರು ಧರ್ಮದ ನೈಜ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಂಡು ಜೀವನವನ್ನು ಸಾಗಿಸಬೇಕು'' ಎಂದು ರಾಜ್ಯ ವಸತಿ ಸಚಿವ ವಿ ಸೋಮಣ್ಣ ಹೇಳಿದರು.
ಡಿಸೆಂಬರ್ 13 ರ ರವಿವಾರ ಧರ್ಮಸ್ಥಳದಲ್ಲಿ ನಡೆದ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ವಾರ್ಷಿಕವಾಗಿ ಆಯೋಜಿಸಲಾಗುತ್ತಿರುವ 88 ನೇ ಆವೃತ್ತಿಯ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸತ್ಯ, ಸದಾಚಾರ, ನ್ಯಾಯ ಮತ್ತು ಉನ್ನತ ಸ್ಥೈರ್ಯವನ್ನು ದೃಢವಾಗಿ ಭದ್ರಪಡಿಸಿದ ಸ್ಥಳವೆಂದು ಧರ್ಮಸ್ಥಳವನ್ನು ಹಾಗೂ ಉಚಿತ ಆಹಾರ, ಶಿಕ್ಷಣ, ಔಷಧಿಗಳನ್ನು ಒದಗಿಸುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡುವ ಕಾರ್ಯಕ್ಕಾಗಿ ಇಲ್ಲಿನ ದೇವಾಲಯ ಆಡಳಿತವನ್ನು ಸೋಮಣ್ಣ ಶ್ಲಾಘಿಸಿದರು.
ಎಲ್ಲಾ ಧರ್ಮಗಳಿಗೆ ಸಂಗಮವಾಗಿರುವ ಧರ್ಮಸ್ಥಳದ ಮೂಲಕ ಮಾನವ ಮೌಲ್ಯ ಸಾರಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿ.ವೀರೇಂದ್ರ ಹೆಗ್ಗಡೆ ಅವರನ್ನು ಅಭಿನಂದಿಸಿದರು.
ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ''ಸದಾಚಾರವು ಪ್ರಪಂಚದ ಎಲ್ಲ ಸ್ವರೂಪದಲ್ಲಿದೆ. ಮಾನವರಲ್ಲಿ ಈ ಗುಣವು ಕಡಿಮೆಯಾಗುತ್ತಿದೆ. ಪ್ರಾಣಿಗಳು, ಪಕ್ಷಿಗಳು, ಪ್ರಕೃತಿ, ಪರಿಸರ ಇತ್ಯಾದಿಗಳು ತಮ್ಮ ನೈಸರ್ಗಿಕ ನಡವಳಿಕೆಯನ್ನು ಉಳಿಸಿಕೊಂಡಿವೆ. ಆದರೆ ಮನುಷ್ಯ ತನ್ನ ಅತಿಯಾದ ದುರಾಸೆಯಿಂದ ಭೂಮಿ, ನೀರು, ಗಾಳಿಯನ್ನು ಕಲುಷಿತಗೊಳಿಸಿದ್ದಾನೆ. ಶುದ್ಧ ಪರಿಸರದ ಸಂರಕ್ಷಣೆ ಮಾಡುವುದು ನಮ್ಮ ಧ್ಯೇಯವಾಕ್ಯವಾಗಿರಲಿ'' ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಕೇಶವ ಮಲಗಿ ಅವರು 'ಕಬೀರರ ಸಿದ್ಧಾಂತಗಳು ಮತ್ತು ಭಕ್ತಿ ಚಳುವಳಿಗಳ ಪ್ರಸ್ತುತತೆ ಕುರಿತು ಮಾತನಾಡಿದರು. ಉಡುಪಿಯ ಪಾದ್ರಿ ಫಾ. ಚೇತನ್ ಲೋಬೊ, ' ಮಾನವೀಯತೆ ' ಎಲ್ಲಾ ಧರ್ಮಗಳ ತಾಯಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಜನರ ಯೋಗಕ್ಷೇಮ ಮತ್ತು ವಿಶ್ವದ ಕಲ್ಯಾಣವನ್ನು ಸಾಧಿಸುವುದು ಪ್ರತಿಯೊಂದು ಧರ್ಮದ ಮೂಲ ಸಿದ್ಧಾಂತಗಳಾಗಿವೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮವು ಜನರನ್ನು ಒಂದುಗೂಡಿಸುತ್ತದೆ. ಮಾನವೀಯತೆಯ ಧರ್ಮವು ಇತರ ಎಲ್ಲ ಧರ್ಮಗಳಿಗಿಂತ ಮೇಲಿರುತ್ತದೆ. ಲೌಕಿಕ ವಿಷಯಗಳಿಗಾಗಿ ವೈಯಕ್ತಿಕ ಧರ್ಮವನ್ನು ಪಾಲಿಸುವಂತೆ ಸಲಹೆ ನೀಡಿದರು.
ಒಬ್ಬರು ತಮ್ಮ ಧರ್ಮ ಪಾಲನೆ ಮಾಡುವಾಗ ಅದು ಇನ್ನೊಬ್ಬರಿಗೆ ತೊಂದರೆ ಉಂಟು ಮಾಡುವುದಿಲ್ಲವೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕೊರೊನಾ ಸಾಂಕ್ರಾಮಿಕಕ್ಕೆ ಎಲ್ಲಾ ಧರ್ಮವು ಸಮಾನ. ಸಾಮರಸ್ಯದ ಸಹಬಾಳ್ವೆ ಎಲ್ಲಾ ಕಾಯಿಲೆಗಳಿಗೆ ಉತ್ತರವಾಗಿದೆ ಎಂದರು.
ಪ್ರಸಕ್ತ ವರ್ಷದಲ್ಲಿ ಧರ್ಮಸ್ಥಳ ಪ್ರತಿಷ್ಠಾನದಿಂದ ವೈದ್ಯಕೀಯ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ 61 ಕೋಟಿ ರೂ. ಅಲ್ಲದೆ 1,135 ದೇವಾಲಯಗಳ ನವೀಕರಣಕ್ಕೆ ಸಹಾಯ ನೀಡಲಾಯಿತು. 260 ಪ್ರಾಚೀನ ದೇವಾಲಯಗಳನ್ನು ಧರ್ಮೋಥನಾ ಟ್ರಸ್ಟ್ ನವೀಕರಿಸಿದೆ ಎಂದು ತಿಳಿಸಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಗತಿಯ ವಿವರಗಳನ್ನೂ ನೀಡಿದರು. ಧಾರ್ಮಿಕ ಸಂಬಂಧಗಳ ಆಧಾರದ ಮೇಲೆ ಜನರನ್ನು ಬೇರ್ಪಡಿಸದೆ ಧರ್ಮಸ್ಥಳ ಜನರ ಸ್ವಾವಲಂಬಿ ಜೀವನಕ್ಕೆ ಬೆಂಬಲವನ್ನು ನೀಡಿದೆ ಎಂದು ಹೇಳಿದರು.
ಡಾ.ಸುಧೀರ್ ಪ್ರಭು ವಂದಿಸಿದರು. ಉಜಿರೆ ಎಸ್ಡಿಎಂ ಕಾಲೇಜು ಉಪನ್ಯಾಸಕ ಡಾ.ಶ್ರೀಧರ್ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.