ಮಂಗಳೂರು, ಡಿ.14 (DaijiworldNews/MB) : ಮಂಗಳೂರು ಹಳೆ ಬಂದರಿನಿಂದ ದ್ವೀಪ ರಾಷ್ಟ್ರ ಮಾಲ್ಡೀವ್ಸ್ಗೆ ಪ್ರಥಮ ಬಾರಿಗೆ ಸರಕು ಸಾಗಾಟ ನೌಕೆ ಡಿ.14ರ ಸೋಮವಾರ ಹೊರಡಲಿದೆ.
ಕೃಷಿ, ತೋಟಕ್ಕೆ ಗೊಬ್ಬರವಾಗಿ ಬಳಸಲು ತೆಂಗಿನ ಗೆರಟೆ ಹುಡಿ, ತರಕಾರಿ ಮತ್ತು ಹಣ್ಣು ಹಂಪಲು ಸಾಗಾಟ ಮಾಡಲಿದ್ದು, ರವಿವಾರ ಕ್ರೇನ್ಗಳ ಮೂಲಕ ಲೋಡಿಂಗ್ ನಡೆಸಲಾಯಿತು.
ಕ್ಯಾಪ್ಟನ್ ಕಣ್ಣನ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಾತೋರಾಯನ್, ಹರಿದಾಸ್, ಸಗಾಯಂ, ಶ್ರಿನಿವಾಸನ್, ವಿಘ್ನೇಶ್ ಪ್ರಥಮ ಯಾನದಲ್ಲಿ ತೆರಳುತ್ತಿದಾರೆ. ಲಕ್ಷದ್ವೀಪದ ಕಡಂಬತ್ತ್ಕಾರ್ಗೆ ಸೇರಿದ ಎಂಎಸ್ವಿ ನೂರ್ ಎ ಅಲ್ ಕದರಿ ಹೆಸರಿನ ನೌಕೆಯನ್ನು ಚರಣ್ದಾಸ್ ವಿ.ಕರ್ಕೇರ ಬಾಡಿಗೆಗೆ ಪಡೆದುಕೊಂಡು, ಸಾಮಾನು ಸರಂಜಾಮು ಸಾಗಾಟ ಮಾಡುತ್ತಿದ್ದಾರೆ.
ನೌಕೆಯನ್ನು ಮಾಸಿಕ ಐದು ಲಕ್ಷ ರೂ. ಬಾಡಿಗೆಗೆ ಪಡೆದುಕೊಂಡಿದ್ದು, ತಿಂಗಳಿಗೆ ಎರಡು ಟ್ರಿಪ್ ಮಾಡಲಿದೆ. ಸೋಮವಾರ ಬೆಳಗ್ಗೆ ನದಿ ನೀರು ಉಬ್ಬರ ಹೆಚ್ಚಾದಾಗ, ಹೊರಟು, 4-5 ದಿನಗಳಲ್ಲಿ ತಲುಪಿ, ಮಾಲ್ದೀವ್ಸ್ ಜೆಟ್ಟಿಯಲ್ಲಿ ಅನ್ಲೋಡ್ ಮಾಡಿ, ಮರಳಿ ಬರಲಿದೆ. ಹೊಸ ಸಾಹಸಕ್ಕೆ ಕೈ ಹಾಕಿದ್ದೇವೆ ಎಂದು ಚರಣ್ ದಾಸ್ ಹೇಳುತ್ತಾರೆ.
ಕಳೆದ ವರ್ಷ ಒಂದು ನೌಕೆ ಹೋಗಿದ್ದರೂ, ಅದು ಗುರಿ ತಲುಪಿರಲಿಲ್ಲ. ಅದರಲ್ಲಿದ್ದ ಸಾಮಾನು ಸರಂಜಾಮು ಸಮುದ್ರ ಪಾಲಾಗಿತ್ತು. ಈ ವರ್ಷ ಅಕ್ಟೋಬರ್ನಲ್ಲಿ ಹೊರಡಬೇಕಿತ್ತು. ಕೋವಿಡ್ ಮತ್ತಿತರ ಕಾರಣಗಳಿಂದ ತಡವಾಗಿದೆ. ಸುಮಾರು 200 ಟನ್ ಸರಕು ಸಾಗಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಲೋಡಿಂಗ್ ಮಾಡುವ ಮಲ್ಲೂರಿನ ಇಬ್ರಾಹಿಂ ಮತ್ತು ಸತ್ತಾರ್ ಹೇಳಿದರು.