ಮಂಗಳೂರು, ಡಿ.14 (DaijiworldNews/PY): ಕೊರೊನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರ ಸೇವೆಗೆ ದೈಜಿವರ್ಲ್ಡ್ ಕೈಗೊಂಡ ಮಿಷನ್ಗಾಗಿ ಡಿ.13ರ ರವಿವಾರ ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ನ ವಾರ್ಷಿಕ ಸಮಾವೇಶ ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ವಾಲ್ಟರ್ ನಂದಳಿಕೆ ಅವರನ್ನು ಸನ್ಮಾನಿಸಲಾಯಿತು.
ಕೊರೊನಾ ಸಾಂಕ್ರಾಮಿಕ ಆರಂಭವಾದ ವೇಳೆ ದೇಶ ಹಾಗೂ ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಲಾಕ್ಡೌನ್ ಹೇರಿದ್ದ ಸಂದರ್ಭ ಆಹಾರ ಹಾಗೂ ಔಷಧದ ಕೊರೆತೆಯಿಂದ ಸಾಕಷ್ಟು ಮಂದಿ ಸಂಕಷ್ಟ ಎದುರಿಸಿದ್ದರು. ಕರಾವಳಿ ಪ್ರದೇಶದಲ್ಲಿ ಸಂಕಷ್ಟಕ್ಕೆ ಒಳಗಾದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ದೈಜಿವರ್ಲ್ಡ್ ಲಾಕ್ಡೌನ್ ಮಿಷನ್ ಅನ್ನು ಪ್ರಾರಂಭಿಸಿದ್ದು, ಈ ಕಾರ್ಯಕ್ರಮಕ್ಕೆ ಜನರಿಂದ ಭಾರಿ ಮನ್ನಣೆ ದೊರೆತಿದೆ.
ವಾಲ್ಟರ್ ನಂದಳಿಕೆ ಅವರೊಂದಿಗೆ ಫ್ರಾನ್ಸಿಸ್ ಮ್ಯಾಕ್ಸಿಂ ಮೊರಾಸ್, ರಾಜ್ಯ ಸರಕಾರದ ಯೋಜನೆ ಆಯೋಗದ ಸದಸ್ಯ ಮಾರ್ಸೆಲ್ ಮೊಂತೆರೋ, ರಫ್ತು ಉತ್ತೇಜನ ಮಂಡಳಿಯ ಮಾಜಿ ಅಧ್ಯಕ್ಷ ಮಾಲ್ಟರ್ ಡಿಸೋಜಾರನ್ನು ಸನ್ಮಾನಿಸಲಾಯಿತು.
ಸಮಾವೇಶವನ್ನು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನಾ ಅವರು ಉದ್ಘಾಟಿಸಿದರು. ಕಥೊಲಿಕ್ ಸಭಾ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿ ಕೊಸ್ತಾ ಅವರು ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ವಾಲ್ಟರ್ ನಂದಳಿಕೆ ಅವರು, "ನಾವು ಸಮಾಜಕ್ಕಾಗಿ ಕೆಲಸ ಮಾಡುವಾಗ ಒಂದು ನಿರ್ದಿಷ್ಟ ಸಮುದಾಯ ಅಥವಾ ಧರ್ಮಕ್ಕಾಗಿ ನಮ್ಮನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಜಾತಿ, ಮತ ಹಾಗೂ ಧರ್ಮದ ಆಧಾರ ಮೇಲೆ ತಾರತಮ್ಯ ಮಾಡದೇ ಎಲ್ಲರನ್ನು ಗೌರವಿಸುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ಹೇಳಿದರು.
"ಕೆಲವರ ಕಾರ್ಯಗಳಿಂದ ಹಾಗೂ ಅವರ ಮತಾಂಧ ಮನೋಭಾವದಿಂದ ನಾವು ನಮ್ಮ ಸಮುದಾಯವನ್ನು ನಿರ್ಣಯಿಸಲು ಸಾಧ್ಯವಿಲ್ಲ. ವಿವಿಧ ಸಮುದಾಯಗಳು, ಧರ್ಮಗಳು ಮತ್ತು ವೈವಿಧ್ಯಮಯ ಆಲೋಚನೆಗಳನ್ನು ಹೊಂದಿರುವ ಜನರೊಂದಿಗೆ ಬೆರೆಯಲು ಮತ್ತು ಸಹಬಾಳ್ವೆ ನಡೆಸಲು ನಾವು ನಿರಾಕರಿಸಿದಾಗ, ನಾವು ಮತಾಂಧರಾಗಿ ಮಾರ್ಪಾಡುತ್ತೇವೆ" ಎಂದರು.
"ಒಬ್ಬ ವ್ಯಕ್ತಿಯು ಸಮಾಜದಲ್ಲಿ ಭಿನ್ನಾಭಿಪ್ರಾಯಗಳನ್ನು ಉಂಟುಮಾಡಲು ಒಂದು ನಿರ್ದಿಷ್ಟ ಸಮುದಾಯವನ್ನು ಪ್ರತ್ಯೇಕಿಸಿದಾಗ, ಅವನು ಅಥವಾ ಅವಳು ಕೋಮುವಾದಿಯಾಗುತ್ತಾರೆ. ಹಿಂದೂ ಮತ್ತು ಮುಸ್ಲಿಮರ ಸಹವರ್ತಿ ಸಮುದಾಯಗಳನ್ನು ಸೇರಿಸದೆಯೇ 'ಸಮಾಜ' ಎಂಬ ಪದವನ್ನು ಉಲ್ಲೇಖಿಸಿದಾಗ ಅಲ್ಲಿ ಯಾವುದೇ ಅಂಶ ಉಳಿಯುವುದಿಲ್ಲ. ಸಾಮಾಜಿಕವಾಗಿರುವ ಹಾಗೂ ಸಹೋದರತ್ವವನ್ನು ಗೌರವಿಸುವುದು ಸಮಾಜದಲ್ಲಿ ಬದುಕಲು ಸರಿಯಾದ ಮಾರ್ಗ" ಎಂದರು.
"ಬಿಷಪ್ ಅವರು ಈಗಾಗಲೇ ಬಂಧುತ್ವದ ಸಂದೇಶವನ್ನು ಸಾರಿದ್ದಾರೆ. ಕ್ಯಾಥೋಲಿಕ್ ಸಮುದಾಯದ ಸದಸ್ಯರು ಬಿಷಪ್ ಮಿಷನ್ ಅನ್ನು ಮುಂದಕ್ಕೆ ಸಾಗಿಸಬೇಕು ಹಾಗೂ ಕಥೊಲಿಕ್ ಸಭಾ ದಾರಿ ತೋರಿಸಬೇಕು" ಎಂದು ಹೇಳಿದರು.
ಉದ್ಘಾಟನೆಯ ಬಳಿಕ ಮಾತನಾಡಿದ ಬಿಷಪ್, "ಕಥೊಲಿಕ್ ಸಭೆಯು ಸಮಾಜದಲ್ಲಿ ನಮ್ಮ ಸಮುದಾಯದ ಮುಖವಾಗಿದೆ. ಕಥೊಲಿಕ್ ಸಭೆಯ ಸದಸ್ಯರು ಕಥೊಲಿಕ್ ಸಮುದಾಯದ ಸ್ವಯಂಸೇವಕರಾಗಿದ್ದು, ಕಥೊಲಿಕ್ ತತ್ವ, ಮೌಲ್ಯಗಳು ಮತ್ತು ನೈತಿಕತೆಗಳಿಂದ ಬಂದ ಸಮಾಜದಲ್ಲಿ ಸದ್ಗುಣವನ್ನು ಪಸರಿಸುತ್ತಾರೆ. ಅವರು ಕಥೊಲಿಕ್ ಸಮಾಜದ ಸದಸ್ಯರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿರುವ ಸೈನಿಕರಂತೆ ಇದ್ದಾರೆ. ಸಮುದಾಯವನ್ನು ಮುನ್ನಡೆಸುವಲ್ಲಿ ಯಶಸ್ವಿಯಾದ ರೋಲ್ಫಿ ಮತ್ತು ಅವರ ತಂಡವನ್ನು ನಾನು ಪ್ರಶಂಸಿಸುತ್ತೇನೆ. ಅವರು ಬಂಧುತ್ವದ ಕಾರ್ಯದಿಂದ ಖಂಡಿತವಾಗಿಯೂ ಸಫಲರಾಗಿದ್ದಾರೆ" ಎಂದು ತಿಳಿಸಿದರು.
ಈ ಸಂದರ್ಭ, ಮೂವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಎಫ್ಎಸ್ ಅಧಿಕಾರಿ ಆಂಟನಿ ಮರಿಯಪ್ಪ ಅವರು ವಿದ್ಯಾರ್ಥಿ ವೇತನ ವಿತರಿಸಿದರು.
ಈ ವೇಳೆ, ಉಪ್ಪಿನಂಗಡಿಯ ಪ್ರಗತಿಪರ ರೈತ ವಿಲಿಯಂ ಲೋಬೋ, ರೈತ ಸಂಘದ ಮುಖಂಡ ಆಲ್ವಿನ್ ಮಿನೇಜಸ್ ಹಾಗೂ ರಿಕ್ಷಾ ಚಾಲಕ ಮೊಂತು ಲೋಬೊ ಅವರನ್ನು ಸನ್ಮಾನಿಸಲಾಯಿತು.
ಭಾರತ ರಫ್ತು ಉತ್ತೇಜನ ಮಂಡಳಿಯ ಅಧ್ಯಕ್ಷ ಹಾಗೂ ಎಐಸಿಯ ರಾಷ್ಟ್ರೀಯ ನಿರ್ದೇಶಕ ಲ್ಯಾನ್ಸಿ ಡಿ ಕುನ್ಹಾ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.