ಉಡುಪಿ, ಡಿ.05 (DaijiworldNews/HR): ಉಡುಪಿ ನಗರಸಭೆ ವ್ಯಾಪ್ತಿಯ ಗೋಪಾಲಪುರ ವಾರ್ಡಿನಲ್ಲಿ (ಸಂತೆಕಟ್ಟೆ) ಮೌಂಟ್ ರೋಸರಿ ಚರ್ಚ್ನ ಎದುರು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಮಾರುಕಟ್ಟೆ ಪರಿಸರದ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಲಿದೆ. ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ಕಳೆದರೂ ಅನೇಕ ಕಾರಣದಿಂದ ಇನ್ನೂ ಉದ್ಘಾಟನೆಗೊಂಡಿರಲಿಲ್ಲ. ಆದರೆ ಮುಂದಿನ ಆದಿತ್ಯವಾರ ಡಿಸೆಂಬರ್ 6 ರಿಂದ ಸಂಪೂರ್ಣ ಸಂತೆ ಮಾರುಕಟ್ಟೆ ವೀರಭದ್ರ ದೇವಸ್ಥಾನದ ಬಳಿ ಕಟ್ಟಿದ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.
ಅನೇಕ ದಶಕಗಳಿಂದ ಸಂತೆ ಮಾರ್ಕೆಟ್ ನಡೆಯುತ್ತಿದ್ದು ಇತ್ತೀಚೆಗಂತೂ ಸರ್ವಿಸ್ ರಸ್ತೆಯ ಹೊರಗೆ ಡಿವೈಡರ್ ಮೇಲೆ ಒಂದು ಕಿ.ಮೀ ದೂರ ವಿಸ್ತರಿಸಿಕೊಂಡು ಜನರಿಗೆ, ವಾಹನ ಚಾಲಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅನೇಕ ಬಾರಿ ಟ್ರಾಫಿಕ್ ತೊಂದರೆಯಾಗುತ್ತಿತ್ತು. ಟ್ರಾಫಿಕ್ ಪೋಲಿಸರು ವಾಹನಗಳನ್ನು ಸುಗಮ ಸಂಚಾರಕ್ಕೆ ತರಲು ಹರಸಾಹಸ ಪಡುತ್ತಿದ್ದರು.
ವೀರಭದ್ರ ದೇವಸ್ಥಾನದ ಬಳಿ ಕಟ್ಟಿರುವ ಸುಸಜ್ಜಿತ ಮಾರ್ಕೆಟ್ ನಿರ್ಮಾಣ ಆಗಿದ್ದರೂ ಉದ್ಘಾಟನೆಯಾಗದೆ ಕುಡುಕರ, ಪೋಲಿ ಹುಡುಗರ ಆಶ್ರಯ ತಾಣವಾಗಿತ್ತು ಈ ಬಗ್ಗೆ ದಾಯ್ಜಿವಲ್ಡ್ನಲ್ಲೂ ಸುದ್ದಿ ಪ್ರಕಟಗೊಂಡಿತ್ತು.
2018ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ ನೆರವೇರಿಸಿದ ಈ ಮಾರುಕಟ್ಟೆಯಲ್ಲಿ ಸುಮಾರು 90 ಮಂದಿ ಕುಳಿತುಕೊಂಡು ವ್ಯಾಪಾರ ನಡೆಸಲು ಸ್ಥಳಾವಕಾಶವಿದೆ. ನೀರು, ಪಾರ್ಕಿಂಗ್, ಚರಂಡಿ ವ್ಯವಸ್ಥೆ ಸೇರಿದಂತೆ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ಈ ಕಟ್ಟಡವನ್ನು 17500 ಸ್ಕ್ವಾರ್ ಪೀಟ್ ವಿಸ್ತೀರ್ಣ ದಲ್ಲಿ ನಿರ್ಮಿಸಿಲಾಗಿದೆ.