ಉಡುಪಿ, ಡಿ.04 (DaijiworldNews/PY): "ಮಲ್ಪೆ-ಪಡುಕೆರೆ ಸಮುದ್ರ ಭಾಗವು ಮರಿನಾ ನಿರ್ಮಿಸಲು ಸೂಕ್ತವಾಗಿದೆ ಎಂಬ ಬಗ್ಗೆ ತಜ್ಞರ ವರದಿ ಆಧಾರದ ಮೇಲೆ ಪ್ರವಾಸೋದ್ಯಮದ ಜೊತೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕತೆ ಅಭಿವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮಲ್ಪೆ-ಪಡುಕೆರೆ ಭಾಗದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಮರಿನಾ ನಿರ್ಮಿಸಲು ಯೋಜನೆ ರೂಪಿಸಿ ಮಂಜೂರುಗೊಳಿಸಿ" ಎಂದು ಶಾಸಕ ರಘುಪತಿ ಭಟ್ ಅವರು ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.
"ಉಡುಪಿ ಜಿಲ್ಲೆ ಪ್ರವಾಸಿಗರನ್ನು ಹಾಗೂ ಭಕ್ತಾದಿಗಳನ್ನು ಸೆಳೆಯುವ ಆಕರ್ಷಣೀಯ ತಾಣಗಳನ್ನು, ಪುಣ್ಯ ಕ್ಷೇತ್ರಗಳನ್ನು ಹೊಂದಿದೆ. ಅದರಲ್ಲಿಯೂ ಇಲ್ಲಿನ ಕಡಲ ಕಿನಾರೆಗೆ (ಬೀಚ್) ದೇಶ - ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುವುದರಿಂದ ಇಲ್ಲಿನ ಕಡಲ ಕಿನಾರೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಅಭಿವೃದ್ಧಿಗಳನ್ನು ಮಾಡಿದಲ್ಲಿ ಜಿಲ್ಲೆಯ ಆರ್ಥಿಕತೆ ವೃದ್ಧಿಗೆ ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು" ಎಂದು ಹೇಳಿದರು.
"ಪಡುಕೆರೆಯಲ್ಲಿ (ಪಡುಕೆರೆ-ಕುತ್ಪಾಡಿ) 20 ಕೋಟಿ ರೂ ವೆಚ್ಚದಲ್ಲಿ ನದಿ ದಂಡಯೋಜನೆ ಯಡಿಯಲ್ಲಿ 30 ಫೀಟ್ ಉದ್ದದ ವಾಕಿಂಗ್ ಟ್ರ್ಯಾಕ್ ನಿರ್ಮಾಣ ವಾಗುತ್ತಿದೆ. ಅಲ್ಲದೆ ಸೈಕಲ್ ಟ್ರ್ಯಾಕ್ ಕೂಡ ಆಗಲಿದೆ. ಇನ್ನು ಇನ್ನೊಂದು ಬದಿಯಲ್ಲಿ ಕಲ್ಲು ಹಾಕಿ ವ್ಯವಸ್ಥೆ ಮಾಡಿದರೆ ಜನರಿಗೆ ನದಿ ಇನ್ನಷ್ಟು ಹತ್ತಿರವಾಗಲಿದೆ. ಸಮುದ್ರ ಮತ್ತು ನದಿಯನ್ನು ಒಟ್ಟಿಗೆ ವೀಕ್ಷಿಸುವ ಅವಕಾಶ ಆಗಲಿದೆ. ಇನ್ನು ಕೇಬಲ್ ಕಾರ್ ಕೂಡ ಮಾಡಲು ಉತ್ತಮ ಅವಕಾಶವಿದೆ. ಈ ಎಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಮಾಡಲು ಉಸ್ತುವಾರಿ ಸಚಿವರು ಕೂಡ ಹೆಚ್ಚು ಆಸ್ಥೆ ವಹಿಸಿ ಸಹಕಾರ ನೀಡಲಿದ್ದಾರೆ" ಎಂದು ಆಶಯ ವ್ಯಕ್ತಪಡಿಸಿದರು.
ಈ ಮಲ್ಪೆ ಸೀ ವಾಕ್ ಉದ್ಯಾನವನದ ಸೌಂದರ್ಯವನ್ನು ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಂಡರು.
ಇಲ್ಲಿ 15 ಅಡಿ ಉದ್ದದ ಸಿಮೆಂಟ್ನಿಂದ ನಿರ್ಮಿಸಿದ ಜಟಾಯು ಮೂರ್ತಿ ಆಕರ್ಷಕ ಕೇಂದ್ರವಾಗಿತ್ತು. ಅಲ್ಲದೆ ಅಲ್ಲಲ್ಲಿ ಉಡುಪಿ ಸಂಸ್ಕೃತಿ ಯನ್ನು ಬಿಂಬಿಸುವ ಮೂರ್ತಿಗಳನ್ನು ಕೆತ್ತಲಾಗಿದೆ. ಇನ್ನು ಬೆಸ್ತರು ದೋಣಿ ದೂಡುವ ಮೂರ್ತಿಯೂ ಕೂಡ ಶಿಲ್ಪ ಕಲೆಯ ವೈಭವವನ್ನು ತೋರಿಸುತ್ತಿತ್ತು. ಅಲ್ಲದೆ ಮಕ್ಕಳಿಗಾಗಿ ಎರಡು ಜಾರು ಬಂಡಿ ನಿರ್ಮಿಸಲಾಗಿದೆ. ಇದನ್ನು ಏರಿ ಸೀ ವಾಕ್ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ. ಈ ಎಲ್ಲಾ ವಿನ್ಯಾಸ ವನ್ನು ನಿರ್ಮಿತಿ ಕೇಂದ್ರದ ಮಾರ್ಗದರ್ಶನ ದಂತೆ ಮಾಡಲಾಗಿದೆ. ಸುಮಾರು 500 ಮೀಟರ್ ಖಾಲಿ ಇದ್ದ ಸ್ಥಳದಲ್ಲಿ ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಅಲ್ಲಲ್ಲಿ ಸಾಂಪ್ರದಾಯಿಕ ಜಾನ ಪದ ಶೈಲಿಯಲ್ಲಿ ಅಂಗಡಿಗಳನ್ನು ಕೂಡ ಹಾಕಲಾಗಿದೆ. ಇದರಿಂದ ಸೀ ವಾಕ್ನ ಸೌಂದರ್ಯಯನ್ನು ಆಸ್ವಾದಿಸಲು ಬರುವ ಪ್ರವಾಸಿಗರಿಗೆ ಇನ್ನಷ್ಟು ಮನೋಲ್ಲಾಸ ನೀಡುತ್ತಿದೆ. ಅಲ್ಲದೆ, ನಡುವೆ ಸುಂದರವಾಗಿ ನಿರ್ಮಿಸಿದ ಬಯಲು ರಂಗ ಮಂಟಪ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ಸ್ಥಳೀಯ ನಗರಸಭಾ ಸದಸ್ಯ ಎಡ್ಲಿನ್ ಕರ್ಕಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮತ್ತು ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ವೈ, ಪೋಲಿಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಸಹಾಯಕ ಪೋಲಿಸ್ ಅಧೀಕ್ಷಕ ಕುಮಾರ್ ಚಂದ್ರ ಉಪಸ್ಥಿತರಿದ್ದರು.
ಯುವ ಜನ ಸಬಲೀಕರಣ ಸಹಾಯಕ ನಿರ್ದೇಶಕರಾದ ರೋಷನ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.