ಕಡಬ, ಡಿ.01 (DaijiworldNews/MB) : ಬಿಳಿನೆಲೆಯಲ್ಲಿ ನಾಪತ್ತೆಯಾಗಿದ್ದ16 ರ ಬಾಲಕಿಯನ್ನು ಕಡಬ ಪೊಲೀಸರು ಮೈಸೂರಿನಲ್ಲಿ ಪತ್ತೆ ಹಚ್ಚಿದ್ದಾರೆ.
ಬಿಳಿನೆಲೆ ಗ್ರಾಮದ ಮದೆಪರ್ಲದ 16 ರ ಬಾಲಕಿಯೋರ್ವರು ಹಾಲು ತರುವ ನೆಪದಲ್ಲಿ ಮನೆಯಿಂದ ಬಿಳಿನೆಲೆಗೆ ತೆರಳಿದ್ದು ಬಳಿಕ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ಕಡಬ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಾಲಕಿಯ ಪತ್ತೆ ಕಾರ್ಯ ಆರಂಭಿಸಿದ ಪೊಲೀಸರು ಮೈಸೂರಿನ ವಿಜಯನಗರ ಪಟ್ಟಣದಲ್ಲಿ ಬಾಲಕಿಯನ್ನು ಪತ್ತೆಹಚ್ಚಿದ್ದಾರೆ.
ಹುಡುಗಿ ತನ್ನ ಫೇಸ್ಬುಕ್ ಸ್ನೇಹಿತನನ್ನು ಹುಡುಕುತ್ತಾ ಬೆಂಗಳೂರಿಗೆ ಹೋಗಿದ್ದಳು. ಅಲ್ಲಿಂದ ಮೈಸೂರಿಗೆ ಪ್ರಯಾಣ ಮಾಡಿದ್ದಳು. ಆದರೆ ಆತ ಅವಳನ್ನು ಮೈಸೂರಿನಲ್ಲೇ ಬಿಟ್ಟು ಆತ ವಾಪಾಸ್ ಬೆಂಗಳೂರಿಗೆ ತೆರಳಿದ್ದ ಎಂದು ಹೇಳಲಾಗಿದೆ.
ಕಡಬ ಪೊಲೀಸರು ಆಕೆಯ ಮೊಬೈಲ್ ಲೊಕೇಶನ್ ಆಧಾರದಲ್ಲಿ ಆಕೆ ಮೈಸೂರಿನಲ್ಲಿ ಇರುವುದು ಪತ್ತೆಹಚ್ಚಿದ್ದಾರೆ. ಪೊಲೀಸರು ಆಕೆಯ ಬಳಿ ಹೋದ ಸಂದರ್ಭ ಆಕೆಯ ಫೇಸ್ಬುಕ್ ಸ್ನೇಹಿತ ಅಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದ್ದು ಬಾಲಕಿಯನ್ನು ಪೊಲೀಸರು ವಾಪಾಸ್ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.
ಕಡಬ ಠಾಣಾ ಎಎಸ್ಐ ಸಿ. ಟಿ. ಸುರೇಶ್ ಮತ್ತು ಹೆಡ್ ಕಾನ್ಸ್ಟೆಬಲ್ ಹರೀಶ್ ತನಿಖೆ ನಡೆಸಿದ್ದು ನಾಪತ್ತೆಯಾದ ಬಾಲಕಿಯನ್ನು ಪತ್ತೆ ಹಚ್ಚಲು ಜಿಲ್ಲಾ ವಿಶೇಷ ವಿಭಾಗದ ಇನ್ಸ್ಪೆಕ್ಟರ್ ರವಿ ಬಿ ಎಸ್ ಮತ್ತು ಸಿಬ್ಬಂದಿ ದಿವಾಕರ್ ಸಹಾಯ ಮಾಡಿದರು.