ಉಳ್ಳಾಲ, ನ. 30 (DaijiworldNews/SM): ಟ್ಯಾಂಕರ್ ಢಿಕ್ಕಿ ಹೊಡೆದು 5ರ ಹರೆಯದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಬಳಿಯ ಉಳ್ಳಾಲಬೈಲಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಗಾಯಾಳು ಮಗುವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೃಷ್ಣ(5) ಗಾಯಾಗೊಂಡ ಮಗುವಾಗಿದೆ. ಉತ್ತರಪ್ರದೇಶ ಮೂಲದ ದಂಪತಿ ಪುತ್ರನಾಗಿರುವ ಮಗು ಹೆತ್ತವರ ಜೊತೆಗೆ ರಸ್ತೆ ದಾಟುವ ಸಂದರ್ಭ ತೊಕ್ಕೊಟ್ಟು ಕಡೆಯಿಂದ ಉಳ್ಳಾಲದತ್ತ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಮಗುವಿನ ಹೊಟ್ಟೆ ಹಾಗೂ ಕೈಯ ಮೇಲೆ ಟ್ಯಾಂಕರ್ ಹರಿದಿರುವುದರಿಂದ ಸ್ಥಿತಿ ಗಂಭೀರವಾಗಿದೆ.
ನಾಗುರಿ ಸಂಚಾರಿ ಠಾಣಾ ಪೊಲೀಸರು ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹೆತ್ತವರ ಕಣ್ಮುಂದೆಯೇ ಭೀಕರ ಅಪಘಾತ :
ಮಗು ಜೊತೆಗೆ ತಾಯಿ ಹಾಗೂ ಸಂಬಂಧಿಕರು ನಡೆದುಕೊಂಡು ಬರುವ ಸಂದರ್ಭವೇ ಅಪಘಾತ ಸಂಭವಿಸಿದೆ. ಹೆತ್ತವರ ಕಣ್ಮುಂದೆಯೇ ಅಪಘಾತ ಸಂಭವಿಸಿದ್ದು, ಮಗುವಿನ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸ್ಥಳೀಯರು ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು.