ಬಂಟ್ವಾಳ, ನ. 26 (DaijiworldNews/SM): ಆರ್ ಟಿಸಿಯಲ್ಲಿದ್ದ ದೋಷ ಸರಿಪಡಿಸಲು ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಬಂಟ್ವಾಳ ತಾಲೂಕು ಕಚೇರಿಯ ಉಪತಹಶೀಲ್ದಾರ್ ರವಿಶಂಕರ್ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ.
ತಾಲೂಕಿನ ಪಜೀರು ನಿವಾಸಿ ಅರುಣ್ ರೊಡ್ರಿಗಸ್ ಅವರು ದೂರು ನೀಡಿದ್ದು, ಬೆಂಜನಪದವಿನಲ್ಲಿ ಅವರ ತಾಯಿಯ ಹೆಸರಿನಲ್ಲಿರುವ ಜಾಗವೊಂದರ ಆರ್ಟಿಸಿಯಲ್ಲಿ 107/1ಎಚ್ ಎಂದು ನಮೂದಿಸುವ ಬದಲು 107/14 ಎಂದು ತಪ್ಪಾಗಿ ನಮೂದಾಗಿತ್ತು. ಇದನ್ನು ಸರಿ ಮಾಡುವ ದೃಷ್ಟಿಯಿಂದ ತಾಯಿ ವೆರೋನಿಕ ರೊಡ್ರಿಗಸ್ ಅವರ ಹೆಸರಿನಲ್ಲಿ 2018ರ ಜೂನ್ 12ರಂದು ಬಂಟ್ವಾಳ ತಹಶೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಸರಿ ಮಾಡುವಂತೆ ತಹಶೀಲ್ದಾರ್ ಅವರು 2019ರ ಮೇ 17ರಂದು ಆದೇಶಿಸಿದ್ದರು.
ಬಳಿಕ ಈ ಕಡತ ಪರಿಶೀಲನೆಗೆ ಮೇರಮಜಲು ಗ್ರಾಮಕರಣಿಕರ ಕಚೇರಿಗೆ ಬಂದಿತ್ತು. ಅಲ್ಲಿಂದ ಶಿಫಾರಸ್ಸು ವರದಿಯೊಂದಿಗೆ ಗ್ರಾಮಕರಣಿಕರ ಕಚೇರಿಗೆ ತೆರಳಿದ್ದು, ಅಲ್ಲಿ ಗ್ರಾಮಕರಣಿಕರು ಒಂದು ವರ್ಷಗಳ ಕಾಲ ತಮ್ಮಲ್ಲೇ ಇಟ್ಟುಕೊಂಡು ಬಳಿಕ ಅನುಮೋದನೆಗೆ ಉಪತಹಶೀಲ್ದಾರ್ ಅವರಿಗೆ ಕಳುಹಿಸಿದ್ದರು. ಆದರೆ ಅವರು ತಿದ್ದುಪಡಿಯ ಕಡತಕ್ಕೆ ಸಹಿ ಹಾಕಿರಲಿಲ್ಲ. ಹೀಗಾಗಿ ದೂರುದಾರರು ಹಲವು ಬಾರಿ ಉಪತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಕಡತವನ್ನು ಕಳುಹಿಸಿಕೊಡಲು ವಿನಂತಿಸುತ್ತಿದ್ದರು. ಕೊನೆಗೆ ಅವರು ಸಹಿ ಹಾಕುವುದಕ್ಕೆ ಲಂಚದ ಬೇಡಿಕೆ ಇಟ್ಟಿದ್ದರು.
ಅದರಂತೆ ನ. 26ರಂದು ಲಂಚ ಪಡೆದುಕೊಳ್ಳುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ದ.ಕ.ಜಿಲ್ಲಾ ಎಸಿಬಿ ಎಸ್ಪಿ ಎನ್.ಸಿ.ಬೋಪಯ್ಯ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ.ಪ್ರಕಾಶ್ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಗುರುರಾಜ್ ಹಾಗೂ ಶ್ಯಾಮ್ಸುಂದರ್ ಎಚ್.ಎಂ. ಅವರು ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಹರಿಪ್ರಸಾದ್, ಉಮೇಶ್ ಟಿ, ರಾಧಾಕೃಷ್ಣ ಕೆ, ರಾಧಾಕೃಷ್ಣ ಡಿ.ಎ, ಪ್ರಶಾಂತ ಎಂ, ವೈಶಾಲಿ, ರಾಜೇಶ್ ಪಿ, ರಾಕೇಶ್ ವಾಗ್ಮನ್ ಪಾಲ್ಗೊಂಡಿದ್ದರು.