ಉಡುಪಿ, ನ.26 (DaijiworldNews/PY): ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ರೈತ ವಿರೋಧಿ, ಜನ ವಿರೋಧಿ ನೀತಿಯ ವಿರುದ್ದ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲವಾಗಿ ಉಡುಪಿಯಲ್ಲಿ ಕೂಡಾ ಮುಷ್ಕರ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್ ಅವರು, "ದೇಶದ ಲಕ್ಷ್ಮೀಯಾದ ಎಲ್ಐಸಿಯನ್ನು ಸರಕಾರ ಮಾರಲು ಹೊರಟಿದೆ. ಕೆಂದ್ರ ಸರಕಾರ ಕಪ್ಪು ಹಣ ತಂದು ಚಿನ್ನದ ರಸ್ತೆಯನ್ನು ಮಾಡುತ್ತೇನೆ ಎಂದಿತು. ನಿಜವಾಗಿಯೂ ಚಿನ್ನದ ರಸ್ತೆಯನ್ನು ಮಾಡಿ ರಸ್ತೆಯಲ್ಲಿ ನಡೆದಾಡದ ಹಾಗೆ ಮಾಡಿದ್ದಾರೆ. ಈ ದೇಶದ ಕಪ್ಪು ಹಣ ಬರುತ್ತೆ ಹೇಳಿದರು. ಆದರೆ, ಕಪ್ಪು ಹಣದ ಲೆಕ್ಕ ಕೂಡಾ ಇವರ ಬಳಿ ಇಲ್ಲ. ಈ ದೇಶದ ಧನಲಕ್ಷ್ಮೀಯನ್ನು ಮಾರಲು ಹೊರಟಿದ್ದಾರೆ. 5 ಕೋಟಿ ಬಂಡವಾಳದಿಂದ ಬಂದ ಎಲ್ಐಸಿ ಇವತ್ತು 32 ಲಕ್ಷ ಕೋಟಿಯ ಸಂಸ್ಥೆಯಾಗಿ ಬೆಳೆದಿದೆ. ಇವತ್ತು ಎಲ್ಐಸಿಯ ಸರ್ವಿಸ್ ಹೇಗೆ ಇದೆ ಎಂದು ಎಲ್ಲಾ ಸಾರ್ವಜನಿಕರಿಗೆ ಗೊತ್ತಿದೆ" ಎಂದರು.
ಕೆಂದ್ರ ಸರಕಾರ ಕಾರ್ಮಿಕ ವಿರೋಧಿಯಾಗಿ ಹೊರಡಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಸರ್ಕಾರಿ ಉತ್ಪಾದನಾ ಮತ್ತು ಸೇವಾ ಸಂಸ್ಥೆಗಳ ಸಾಂಸ್ಥೀಕರಣವನ್ನು ನಿಲ್ಲಿಸಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ 7,500 ರೂ. ಹಾಗೂ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಆಹಾರ ಪದಾರ್ಥಗಳನ್ನು ನೀಡಬೇಕು. ಎನ್.ಪಿ.ಎಸ್ ಅನ್ನು ರದ್ದು ಮಾಡಿ ಈ ಹಿಂದಿನ ಪಿಂಚಣಿ ವ್ಯವಸ್ಥೆಯನ್ನು ಮುಂದುವರಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿರಿಸಿ ಪ್ರತಿಭಟನಾಕಾರರು ಕೆಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಎಐಬಿಇಎಯ ಹೆರಾಲ್ಡ್ ಡಿಸೋಜ, ಸಂಚಾಲಕ ಕೆ. ಶಂಕರ್, ಎಐಬಿಇಎಯ ರಾಜ್ಯ ಸದಸ್ಯ ಕೆ ರಮೇಶ್, ನಾಗೇಶ್ ನಾಯ್ಕ್, ಬಿ.ಇ.ಎಪ್.ಐ ಯ ರವೀಂದ್ರ ಯು ಹಾಗೂ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.