ಮಂಗಳೂರು: ಲಾಕ್ಡೌನ್ ಹೊಡೆತ - ಫಿನಾಯಿಲ್ ಮಾರಿ ಜೀವನ ಸಾಗಿಸುತ್ತಿರುವ ಅಂಧ ಸಂಗೀತ ಕಲಾವಿದರು
Sun, Nov 22 2020 04:04:04 PM
ಮಂಗಳೂರು, ನ. 22 (DaijiworldNews/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ವ್ಯವಹಾರಗಳ ಬಗ್ಗೆ ಹೆಚ್ಚಿನ ಜನರು ಮಾತನಾಡುತ್ತಾರೆ. ಆದರೆ ಹಠಾತ್ತನೇ ಲಾಕ್ಡೌನ್ ಹೇರಿದ ಕಾರಣ ಭಾರೀ ಹೊಡೆತವನ್ನು ಅನುಭವಿಸಿದ ಸಣ್ಣ ಕಲಾವಿದರ ಬಗ್ಗೆ ಮಾತನಾಡುವವರು ಭಾರೀ ಕಡಿಮೆ. ಈ ಲಾಕ್ಡೌನ್ ಬಳಿಕ ಇಂತಹ ಹಲವು ಕಲಾವಿದರು ಸಣ್ಣ ಪುಟ್ಟ ಉದ್ಯೋಗವನ್ನು ನಡೆಸಲು ಆರಂಭಿಸಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಅಂಧ ಸಂಗೀತ ಕಲಾವಿದರ ಗುಂಪು.
ರಾಜ್ಯದಾದ್ಯಂತ ಸಂಚರಿಸುತ್ತಿದ್ದ ಸಂಗೀತ ಪ್ರದರ್ಶನಗಳಿಂದ ಅನೇಕರಿಗೆ ಸ್ಫೂರ್ತಿ ನೀಡುತ್ತಿದ್ದ ಈ ಅಂಧ ಸಂಗೀತ ಕಲಾವಿದರ ಗುಂಪು ಲಾಕ್ಡೌನ್ ಬಳಿಕ ಬೇರೆ ದಿಕ್ಕು ತೋರದೆ ಈಗ ಫಿನಾಯಿಲ್ ಹಾಗೂ ಹ್ಯಾಂಡ್ ವಾಷ್ ಮಾರಾಟ ಮಾಡುತ್ತಿದ್ದಾರೆ.
ಚಿಕ್ಕಮಗಳೂರಿನ ಕಾಂತಿನಗರದ ಶ್ರೀ ಶಾರದಾ ಬ್ಲೈಂಡ್ ಸಿಂಗರ್ಸ್ ಅಸೋಸಿಯೇಷನ್, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದ ಅಂಧ ಕಲಾವಿದರ ಗುಂಪಾಗಿದೆ. ಈ ಗುಂಪಿನಲ್ಲಿ ಒಟ್ಟು 15 ಮಂದಿ ಸದಸ್ಯರು ಇದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಅವರು ರಾಜ್ಯಾದ್ಯಂತ ಬೀದಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಆದರೆ ಹಠಾತ್ ಲಾಕ್ಡೌನ್ ಹೇರಿದ್ದರಿಂದ ಅವರಿಗೆ ಹಲವು ಸಮಯಗಳ ಕಾಲ ಯಾವುದೇ ಬೀದಿ ಪ್ರದರ್ಶನ ಮಾಡಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಲಾಗದೆ ಹಾಗೂ ಯಾವುದೇ ಕಾರ್ಯಕ್ರಮ ನಡೆಸಲಾಗದ ಕಾರಣ ಲಾಕ್ಡೌನ್ ಕಲಾವಿದರಿಗೆ ಭಾರೀ ಸಂಕಷ್ಟಕ್ಕೆ ತಳ್ಳಿತು. ಒಂದು ಹೊತ್ತಿನ ಊಟಕ್ಕಾಗಿ ಅವರು ಫಿನಾಯಿಲ್ನ್ನು ಅತ್ಯಲ್ಪ ಬೆಲೆಗೆ ಮಾರಾಟ ಮಾಡಲು ಆರಂಭಿಸಿದರು.
ನಾಲ್ಕು ವರ್ಷಗಳ ಹಿಂದೆ ಅವರು ಮಂಗಳೂರು ತಲುಪಿದಾಗ ಅವರು ಆರು ತಿಂಗಳ ಕಾಲ ಲಾಡ್ಜ್ನಲ್ಲಿದ್ದರು. ಬಳಿಕ ಇವರ ಸಹಾಯಕ್ಕೆ ಧಾವಿಸಿದ ಓರ್ವ ವ್ಯಕ್ತಿಯು ಪಡೀಲ್ನ ಮಹಾದೇವಿ ಬಜನಾ ಮಂದಿರದ ಬಳಿ ಬಾಡಿಗೆ ಮನೆಯನ್ನು ಒದಗಿಸಿದರು.
ಈ ಬಗ್ಗೆ ದೈಜಿವರ್ಲ್ಡ್ ಜೊತೆ ಮಾತನಾಡಿದ ಗುಂಪಿನ ಉಪಾಧ್ಯಕ್ಷ, "ಮಂಗಳೂರಿನ ಜನರು ಬಹಳ ಸಹಾಯಕರಾಗಿದ್ದಾರೆ. ನಾವು ಯಾವುದೇ ಸ್ಥಳಕ್ಕೆ ಹೋಗಬೇಕಾದಾಗ ಇಲ್ಲಿ ನಮಗೆ ಹಲವು ಜನರು ನಾವು ತಲುಪಬೇಕಾದ ಸ್ಥಳಕ್ಕೆ ತೆರಳಲು ಸಹಾಯ ಮಾಡುತ್ತಾರೆ. ನಮಗೆ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ದೊರೆತ ಬಳಿಕ ನಾವು ಬಸ್, ಕಾರು ಅಥವಾ ಆಟೋ ಮೂಲಕ ಸ್ಥಳಕ್ಕೆ ತೆರಳುತ್ತೇವೆ. ನಮ್ಮ ಗುಂಪು ತಬಲ, ಕೀಬೋರ್ಡ್ ಇತ್ಯಾದಿಗಳು ಚೆನ್ನಾಗಿ ತಿಳಿದಿರುವ ಪ್ರತಿಭಾವಂತ ಕಲಾವಿದರನ್ನು ಒಳಗೊಂಡಿದೆ. ನಾವು ತುಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡುತ್ತೇವೆ ಮತ್ತು ಪ್ರೇಕ್ಷಕರನ್ನು ರಂಜಿಸುತ್ತೇವೆ. ನಮ್ಮ ಬೀದಿ ಪ್ರದರ್ಶನಗಳಲ್ಲಿ, ಪ್ರೇಕ್ಷಕರು ನಮಗೆ ಧನಸಹಾಯ ಮಾಡುತ್ತಾರೆ. ಹಾಗೆಯೇ ಕೆಲವೊಮ್ಮೆ ಬೇರೆ ಕಡೆ ಪ್ರದರ್ಶನ ನೀಡಲು ನಮಗೆ ಆಹ್ವಾನ ನೀಡುತ್ತಾರೆ" ಎಂದು ಹೇಳಿದರು.
''ಆದರೆ ಲಾಕ್ಡೌನ್ ಹೇರಿಕೆಯಾದಾಗ ನಮಗೆ ಸಂಕಷ್ಟ ಉಂಟಾಯಿತು. ಲಾಕ್ಡೌನ್ ಸಮಯದಲ್ಲಿ ನಮಗೆ ಯಾವುದೇ ಸ್ಥಳಗಳಿಗೆ ತೆರಳಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಇದರಿಂದಾಗಿ ನಮಗೆ ಯಾವುದೇ ಆದಾಯವಿರಲಿಲ್ಲ. ಸ್ಥಳೀಯ ಸಂಸ್ಥೆಗಳು ನಮಗೆ ಕಿಟ್ಗಳನ್ನು ಒದಗಿಸುವ ಮೂಲಕ ಸಹಾಯ ಮಾಡಿವೆ. ದಿನಗಳು ಉರುಳಿದಂತೆ ಜೀವನ ಸಾಗಿಸಲು ಬಹಳ ಕಷ್ಟವಾಯಿತು. ನಾವು ನಮ್ಮ ಶಾಲಾ ದಿನಗಳಲ್ಲಿ ಫಿನಾಯಿಲ್ನ್ನು ಹೇಗೆ ತಯಾರಿಸುವುದು ಎಂದು ಕಲಿತ್ತಿದ್ದೆವು. ಹಾಗಾಗಿ ಕಳೆದ ಎರಡು ತಿಂಗಳುಗಳಿಂದ ನಾವು ಜನರಿಗೆ ಫಿನಾಯಿಲ್ ಮಾರಾಟ ಮಾಡಲು ಆರಂಭಿಸಿದ್ದೇವೆ. ಕಳೆದ ಮೂರು ತಿಂಗಳುಗಳಿಂದ ಪಾವತಿಸಲಾಗದೆ ಬಾಕಿ ಉಳಿದಿದ್ದ ಬಾಡಿಗೆ ಹಣವನ್ನು ಒಟ್ಟುಗೂಡಿಲು ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ'' ಎಂದು ನೋವಿನಿಂದ ನುಡಿದಿದ್ದಾರೆ.
''ಫಿನಾಯಿಲ್ ತಯಾರಿಸಲು ಬಳಸುವ ವಸ್ತುಗಳನ್ನು ತರಲು ಸ್ಥಳೀಯರು ನಮಗೆ ಸಹಾಯ ಮಾಡಿದರು. ಅದರಿಂದಾಗಿ ಈಗ ನಮಗೆ ಈಗ ಫಿನಾಯಿಲ್ ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿದೆ. ಫಿನಾಯಿಲ್ ಬಾಟಲಿಗೆ 50 ರೂ. ಮತ್ತು ಹ್ಯಾಂಡ್ ವ್ಯಾಷ್ಗೆ ಬೆಲೆ 60 ರೂ.ಯಂತೆ ಮಾರಾಟ ಮಾಡುತ್ತೇವೆ. ನಾವು ಜೀವನ ಸಾಗಿಸಲು ಬೇರೆ ಯಾವ ದಾರಿಯೂ ಕಾಣದ ಹಿನ್ನೆಲೆ ಈಗ ನಾವು ಫಿನಾಯಿಲ್ ಮಾರಾಟಕ್ಕೆ ಮುಂದಾಗಿದ್ದೇವೆ. ನಾವು ಉತ್ಪನ್ನಗಳನ್ನು ಸ್ಥಳೀಯ ಸ್ಥಳಗಳಲ್ಲಿ ಹಾಗೂ ಪೊಲೀಸ್ ಠಾಣೆಗಳಲ್ಲಿಯೂ ಮಾರಾಟ ಮಾಡಲು ಆರಂಭಿಸಿದ್ದೇವೆ. ಅಲ್ಲದೇ ನಮ್ಮ ಪ್ರದರ್ಶನದ ಸಮಯದಲ್ಲಿ ಸಾರ್ವಜನಿಕರು ನಮ್ಮ ಉತ್ಪನ್ನಗಳನ್ನು ಖರೀದಿಸಬಹುದು. ಇದರಿಂದ ನಮಗೆ ಸಹಾಯವಾಗಿದೆ'' ಎಂದು ಕೃಷ್ಣ ಹೇಳಿದ್ದಾರೆ.