ಮಂಗಳೂರು, ನ.21 (DaijiworldNews/PY): ನಗರದಲ್ಲಿ ಎರಡು ದಿನಗಳಲ್ಲಿ ಸರ ಕಳ್ಳತನವಾದ ಮೂರನೇ ಪ್ರಕರಣ ನ.19ರ ಗುರುವಾರದಂದು ನಡೆದಿದೆ.
ಸಾಂದರ್ಭಿಕ ಚಿತ್ರ
ನ.19ರ ಗುರುವಾರ ಮಧ್ಯಾಹ್ನ 1.20 ರ ಸುಮಾರಿಗೆ ಶಾರದಾ ಎಂಬವರು ಕುಲಶೇಖರಕ್ಕೆ ಹೋಗಿ ಮೊಮ್ಮಗನೊಂದಿಗೆ ರಿಕ್ಷಾದಲ್ಲಿ ವಾಪಾಸ್ಸು ಬಂದು ಭಾರತ್ ಪ್ರಿಂಟರ್ಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಯೋರ್ವ ಬೈಕ್ ಅನ್ನು ದೂರದಲ್ಲಿ ನಿಲ್ಲಿಸಿ ನಡೆದುಕೊಂಡು ಬಂದು ಶಾರದಾ ಅವರ ಕುತ್ತಿಗೆಯಲ್ಲಿದ್ದ ಸುಮಾರು 70,000 ರೂಪಾಯಿ ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದು ಬೈಕ್ನಲ್ಲಿ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಶಾರದಾ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
"ನ.18ರ ಬುಧವಾರದಂದು ಕದ್ರಿ ಠಾಣಾ ವ್ಯಾಪ್ತಿಯ ಶಾಂತಿನಗರ ಹಾಗೂ ಕೆಪಿಟಿ ಬಳಿ ಸರ ಕಳ್ಳತನ ಪ್ರಕರಣ ನಡೆದಿದೆ. ಕೊರೊನಾ ಲಾಕ್ಡೌನ್ ಬಳಿಕ ಸರ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಗುಪ್ತಚರ ವರದಿಗಳಿದ್ದು, ಹೆಚ್ಚು ಓಡಾಟವಿಲ್ಲದ ಸ್ಥಳಗಳಲ್ಲಿ ಒಂಟಿಯಾಗಿ ಹೋಗುವ ಮಹಿಳೆಯರು ತಮ್ಮ ಚಿನ್ನಾಭರಣದ ಬಗ್ಗೆ ಜಾಗ್ರತೆ ವಹಿಸಬೇಕು" ಎಂದು ಪೊಲೀಸರು ಮನವಿ ಮಾಡಿದ್ದಾರೆ.