ಮಂಗಳೂರು, ನ. 14 (DaijiworldNews/MB) : ಇಲ್ಲಿನ ಅಶೋಕ್ನಗರ ಮತ್ತು ಉರ್ವಸ್ಟೋರ್ ನಡುವಿನ ರಸ್ತೆ ಕಾಮಗಾರಿ ಆರಂಭವಾಗಿ ಒಂದು ವರ್ಷವಾಗಿದ್ದರೂ ಕೂಡಾ ಈಗಲೂ ಕಾಮಗಾರಿ ಕಾರ್ಯ ಪ್ರಗತಿಯಲ್ಲಿದೆ. ಕೆಲಸದ ನಿಧಾನಗತಿಯಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಳಚರಂಡಿ ಕಾಮಗಾರಿಗಾಗಿ ಶೇಡಿಗುರಿವರೆಗಿನ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಈ ರಸ್ತೆಯಲ್ಲಿ ಪ್ರಯಾಣ ಮಾಡುವುದು ಕಷ್ಟಕರವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಾಮಾಜಿಕ ಕಾರ್ಯಕರ್ತ ಪಾಂಡುರಂಗ ಕುಕ್ಯಾನ್ ಕೋಡಿಕಲ್, ''ಒಳಚರಂಡಿ ಕಾಮಗಾರಿ ಕೈಗೆತ್ತಿಕೊಂಡಾಗ ಅಶೋಕ್ ನಗರದಿಂದ ಶೇಡಿಗುರಿವರೆಗಿನ ಸಂಪೂರ್ಣ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಪೈಪ್ ಹಾಕಿದ ಬಳಿಕ ಕೊಳವೆಗಳ ಮೇಲೆ ಮಣ್ಣು ಹಾಕಲಾಗಿತ್ತು. ಆದರೆ ಮಳೆ ಬಂದಾಗಿ ರಸ್ತೆ ಪೂರ್ತಿ ಕೆಸರು ತುಂಬುತ್ತಿದ್ದು ಬಿಸಿಲಿನ ಸಂದರ್ಭದಲ್ಲಿ ಧೂಳು ರಸ್ತೆಬದಿಯ ಅಂಗಡಿಗಳು ಮತ್ತು ಮನೆಗಳಿಗೆ ಪ್ರವೇಶಿಸುತ್ತಿದೆ'' ಎಂದು ಹೇಳಿದ್ದಾರೆ.
ನಗರ ಪಾಲಿಕೆಯು 'ಅಮೃತ್' ಯೋಜನೆಯಡಿ ಈ ಕೆಲಸವನ್ನು ಕೈಗೆತ್ತಿಕೊಂಡಿದೆ. ಕೆಲಸ ಪ್ರಾರಂಭವಾಗಿ ಹಲವಾರು ತಿಂಗಳುಗಳು ಕಳೆದಿವೆ. ಸಣ್ಣ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ, ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಹನಗಳು ಕಿರಿದಾದ, ಪರ್ಯಾಯ ರಸ್ತೆಯ ಮೂಲಕ ಸಂಚಾರ ನಡೆಸುತ್ತಿದೆ. ಈ ಪ್ರದೇಶದ ಜನರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನು ರಸ್ತೆ ವಿಸ್ತರಣೆಗಾಗಿ ಕೆಲವರು ತಮ್ಮ ಭೂಮಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲದ ಕಾರಣ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಲಾಗಿದೆ.
ಕೆಲವರು ತಮ್ಮ ಭೂಮಿಯನ್ನು ಹಸ್ತಾಂತರಿಸಿದ್ದರೆ ಇನ್ನು ಕೆಲವರು ರಸ್ತೆ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
''ಕೆಲಸವನ್ನು ಗುತ್ತಿಗೆ ಪಡೆದ ಸಂಸ್ಥೆಯು ಇಲ್ಲಿ ಕೆಲವೇ ಕಾರ್ಮಿಕರನ್ನು ಮಾತ್ರ ನೇಮಿಸಿಕೊಂಡಿರುವುದರಿಂದ ಕೆಲಸವು ತೀರಾ ನಿಧಾನವಾಗಿ ನಡೆಯುತ್ತಿದೆ'' ಎಂದು ಸ್ಥಳೀಯರು ಹೇಳುತ್ತಾರೆ.
''ರಸ್ತೆ ವಿಸ್ತರಣೆ ಕಾರ್ಯಗಳ ಜೊತೆಗೆ ಡಾಂಬರು ಹಾಕುವ ಕೆಲಸ ಕೂಡ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಶೀಘ್ರದಲ್ಲೇ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು'' ಎಂದು ಇಲ್ಲಿನ ಕಾರ್ಪೋರೇಟರ್ ಜಯಲಕ್ಷ್ಮಿ ವಿ ಶೆಟ್ಟಿ ತಿಳಿಸಿದ್ದಾರೆ.