ಮಂಗಳೂರು, ನ. 09 (DaijiworldNews/SM): ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಹಿನ್ನೆಲೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಇದರಿಂದಾಗಿ ನಗರದಲ್ಲಿ ಸಂಚಾರ ದಟ್ಟನೆ ಹೆಚ್ಚಾಗಿದ್ದು, ಈ ಬಗ್ಗೆ ದೈಜಿವರ್ಲ್ಡ್ ನೊಂದಿಗೆ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸಭೆ ಕರೆದು ಸೂಚನೆ ನೀಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ರಾತ್ರಿಯಿಂದ ಪ್ರತಿದಿನ ರಾತ್ರಿ ವೇಳೆ ಮಂಗಳೂರು ನಗರದ ಕಾಮಗಾರಿ ಪರಿಶೀಲನೆಗೆ ತೆರಳುತ್ತೇನೆ. ಕೆಲವೇ ದಿನಗಳಲ್ಲಿ ಎಲ್ಲಾ ವ್ಯವಸ್ಥಿತಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. 2-3 ದಿನಗಳಲ್ಲಿ ಸಮಸ್ಯೆ ಪರಿಹಾರಗೊಳ್ಳಲಿದ್ದು, ಸಾರ್ವಜನಿಕರು ಪಾಲಿಕೆ, ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಹಂಪನಕಟ್ಟೆ ಪ್ರದೇಶದ ಕಾಮಗಾರಿ ಇಂದೇ ಮುಗಿಸಲು ತಿಳಿಸಿದ್ದೇನೆ. ಇನ್ನು ಬಂದರು ಪ್ರದೇಶಗಳಲ್ಲಿ ಘನವಾಹನಗಳ ಸಂಚಾರ ಹೆಚ್ಚಿದೆ. ಆದ್ದರಿಂದ ಬಂದರು ಭಾಗದಲ್ಲಿ ಹಗಲು ಕಾಮಗಾರಿ ನಡೆಸದಂತೆ ಸೂಚನೆ ನೀಡಲಾಗಿದೆ. ಕೊರೋನಾ ಹಿನ್ನೆಲೆ ಕಾಮಗಾರಿ ನಡೆಸಲು ತಡವಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.