ಉಡುಪಿ, ನ. 06 (DaijiworldNews/SM): ಎಕೆಎಂಎಸ್ ಬಸ್ ಮಾಲಕನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೋಲಿಸರು ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ದರ್ಶನ್ ದೇವಯ್ಯ ವಿರಾಜಪೇಟೆ, ಸೌಭಾಗ್ಯ, ಅನಿಲ್ ಕುಮಾರ್, ಮಹೇಶ್ ಬಾಬು ಹಿರಿಯಪಟ್ಣ, ಸೋಮು ಕೆ.ಆರ್.ನಗರ, ಸುಕೇಶ್ ಪೂಜಾರಿ, ಮೋಹನ್ ಬೆಳ್ತಂಗಡಿ, ಗೋಪಾಲ್ ಮೂಡುಬಿದಿರೆ, ಸಂತೋಷ್ ಮುಡುಮನೆ ಬಂಧಿತರಾಗಿದ್ದಾರೆ. ಕಾರ್ಕಳದ ಲಾಡ್ಜ್ ಒಂದರಲ್ಲಿ ಆರೋಪಿಗಳು ತಲೆಮರೆಸಿಕೊಂಡು ಕುಳಿತಿದ್ದರು.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ೨ ದಿನಗಳ ಹಿಂದೆ ಎಕೆಎಂಎಸ್ ಬಸ್ ಮಾಲಿಕ ಸೈಫುದ್ದೀನ್ ಹತ್ಯೆಗೆ ಯತ್ನ ನಡೆದಿತ್ತು. ಅವರ ಕಚೇರಿಗೆ ತಲವಾರು, ಮಾರಕಾಸ್ತ್ರ ಸಹಿತ ಆಗಮಿಸಿದ್ದ ಆರೋಪಿಗಳು ಹತ್ಯೆ ಯತ್ನ ನಡೆಸಿದ್ದರು.
ಈ ವೇಳೆ ಸೈಫ್ ಮತ್ತು ಸ್ನೇಹಿತ ಅಕ್ರಂ ಸ್ವಲ್ಪದರಲ್ಲಿ ದಾಳಿಯಿಂದ ಪಾರಾಗಿದ್ದರು. ಹತ್ಯೆ ವಿಫಲವಾದ ಹಿನ್ನಲೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಕೇವಲ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.