ಮಂಗಳೂರು, ನ.06 (DaijiworldNews/PY): ನಾಟಕ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡುವಂತೆ ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ತು (ರಿ) ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಸದಸ್ಯರು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಮನವಿ ಮಾಡಿರುವ ಸದಸ್ಯರು, ದ.ಕ ಜಿಲ್ಲೆ ಹಾಗೂ ಇತರ ಜಿಲ್ಲೆಗಳು ಜನಪದ ಹಾಗೂ ಸಾಂಸ್ಕೃತಿಕ ಕೇಂದ್ರಗಳ ತವರೂರಾಗಿದ್ದು, ಕಲೆ ಮತ್ತು ಕಲಾರಾಧಕರು ಬಹು ಸಂಖ್ಯಾತರಿದ್ದು, ಬಿಡುವಿನ ಸಮಯದಲ್ಲಿ ನಾಟಕ ಹಾಗೂ ಇನ್ನಿತರ ಸಾಂಸ್ಕೃತಿಕ ಜಾನಪದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ.
ಇದೀಗ ಕಳೆದ ಒಂದು ವರ್ಷದಿಂದ ನಮ್ಮ ಜಿಲ್ಲೆಯಲ್ಲಿ ಸಾಂಸ್ಕೃತಿಕ ಹಾಗೂ ಜನಪದ ಕಾರ್ಯಕ್ರಮಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಕಲಾವಿದರಿಗೆ ದೈನಂದಿನ ಜೀವನ ಸಾಗಿಸಲು ಕಷ್ಟ ಸಾಧ್ಯವಾಗಿದೆ. ಅದೇ ರೀತಿ ಕಲಾ ರಸಿಕರಿಗೆ, ಕಲಾರಾಧಕರಿಗೆ, ಮನರಂಜನೆಯ ಬಗ್ಗೆ ಯಾವುದೇ ಕಾರ್ಯಕ್ರಮಗಳಿಲ್ಲದೇ ಕೇವಲ ದೃಶ್ಯ ಮಾಧ್ಯಮವನ್ನು ವೀಕ್ಷಿಸುವ ಪರಿಸ್ಥಿತಿ ಬಂದಿದೆ.
ಕರಾವಳಿ ಜಿಲ್ಲೆಯಲ್ಲಿ ಸುಮಾರು 50ಕ್ಕಿಂತಲೂ ಅಧಿಕ ವೃತ್ತಿಪರ ನಾಟಕ ತಂಡಗಳಿದ್ದು, ನಾಟಕಗಳಲ್ಲಿ ದುಡಿಯುವ ಹೆಚ್ಚಿನ ರಂಗ ಕಲಾವಿದರು ಕಲೆಯನ್ನೇ ಜೀವನದ ವೃತ್ತಿಯನ್ನಾಗಿಸಿದ್ದು, ಕಲಾವಿದರಿಗೆ ಬೇರೆ ಆದಾಯದ ಮೂಲಗಳಿರುವುದಿಲ್ಲ.
ಸರಕಾರದ ಸುತ್ತೋಲೆಯಂತೆ ಹೆಚ್ಚು ಕಡಿಮೆ ಎಲ್ಲಾ ವಿಧ ಮನೋರಂಜನಾ ಕಾರ್ಯಕ್ರಮಗಳಿಗೆ ಸರಕಾರ ಷರತ್ತಿನ ಆಧಾರದಲ್ಲಿ ಅನುಮತಿ ನೀಡಿದೆ. ನಮ್ಮ ನಾಟಕ ಕಾರ್ಯಕ್ರಮಗಳು ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ನಡೆಯುತ್ತಿದ್ದು, ಸರಕಾರದ ಸುತ್ತೋಲೆಯಂತೆ ಪೂರ್ಣ ಅನುಮತಿಯನ್ನು ಪಡೆದು, ನಾಟಕ ಕಾರ್ಯಕ್ರಮವನ್ನು ನಡೆಸಲು ನಾವು ನಿರ್ಧರಿಸಿದ್ದು, ನಾಟಕ ಪ್ರದರ್ಶನಗಳಿಗೆ ಅನುಮತಿ ನೀಡಬೇಕು.
ನಮ್ಮ ನಾಟಕ ಕಾರ್ಯಕ್ರಮವನ್ನು ವೀಕ್ಷಿಸುವವರು ಜನಸಾಮಾನ್ಯರಾಗಿದ್ದು, ನಾಟಕ ಕಾರ್ಯಕ್ರಮಗಳು ಸೀಮಿತ ಅವಧಿಯಾಗಿದ್ದು, ನಿಗದಿತ ಸಮಯದಲ್ಲಿ ಕಾರ್ಯಕ್ರಮವನ್ನು ಮುಗಿಸುವವರೆಗೆ ನಾವುಗಳು ಬದ್ದರಾಗಿದ್ದು, ಕಲಾವಿದರ ಕರಸೇವೆಗೆ ಹಾಗೂ ಕಲಾವಿದರ ಬದುಕಿಗೆ ಜೀವ ತುಂಬುವ ಕೆಲಸವನ್ನು ನಾಟಕ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಮೂಲಕ ಕಲಾಮಾತೆಗೆ ಹಾಗೂ ಕಲಾವಿದರ ಬದುಕಿನಲ್ಲಿ ಅಮೃತ ತುಂಬುವ ಕಾರ್ಯವನ್ನು ನಾಟಕ ಪ್ರದರ್ಶನಗಳಿಗೆ ಅನುಮತಿ ನೀಡುವ ಮೂಲಕ ಸುಗಮ ಜೀವನಕ್ಕೆ ದಾರಿ ಮಾಡಕೊಡಬೇಕಾಗಿ ಮನವಿ ಮಾಡಿದ್ದಾರೆ.
ಕರಾವಳಿ ಕರ್ನಾಟಕ ರಂಗ ಕಲಾವಿದರ ಸೇವಾ ಪರಿಷತ್ತು (ರಿ) ದ.ಕ, ಉಡುಪಿ ಕಾಸರಗೋಡು ಜಿಲ್ಲೆ ಇದರ ಅಧ್ಯಕ್ಷ ಮೋಹನ್ ದಾಸ್ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕಣ್ಣೂರು, ಗೌರವ ಸಲಹೆಗಾರ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಸ್ಥಾಪಕ ಸದಸ್ಯ ರಮೇಶ್ ರೈ ಕುಕ್ಕುವಳ್ಳಿ, ಚಿದಾನಂದ ಅದ್ಯಪಾಡಿ, ನ್ಯಾಯವಾದಿ ಮೋಹನ್ ದಾಸ್ ರೈ, ಕೀತ್ ಪುರ್ತಾಡೊ, ಚಲನಚಿತ್ರ ನಿರ್ದೇಶಕ ವಿಶ್ವನಾಥ್ ಕೋಡಿಕಲ್, ನ್ಯಾಯವಾದಿ ರಿತೇಶ್ ಬಂಗೇರ ಹಾಗೂ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಉಪಸ್ಥಿತರಿದ್ದರು.
ಮನವಿ ಪಡೆದುಕೊಂಡ ಜಿಲ್ಲಾಧಿಕಾರಿ ಸರಕಾರ ಹೇರಿರುವ ನಿಯಮಗಳನ್ನು ಪಾಲಿಸಿ ಅದರ ಪ್ರಕಾರ ನಾಟಕ ಪ್ರದರ್ಶನ ಮಾಡುವಂತೆ ಒಪ್ಪಿಗೆ ನೀಡಿದ್ದಾರೆ.