ಕುಂದಾಪುರ, ನ.06 (DaijiworldNews/PY): ವಂಡ್ಸೆ ಗ್ರಾಮ ಪಂಚಾಯಿತಿಯ ಮಹಿಳೆಯರ ಸ್ವಾವಲಂಬನಾ ಕೇಂದ್ರದಿಂದ ಅಧಿಕಾರಿಗಳು ಒಯ್ದಿದ್ದ ಸ್ವತ್ತುಗಳನ್ನು ವಶಕ್ಕೆ ಪಡೆದ ನ್ಯಾಯಾಲಯ ಅವುಗಳನ್ನು ಕೇಂದ್ರಕ್ಕೆ ಹಿಂದಿರುಗಿಸುವಂತೆ ಆದೇಶ ನೀಡಿದೆ.
ವಂಡ್ಸೆ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಕೇಂದ್ರದ ಅಧೀನದ ಸ್ವಾವಲಂಬನಾ ಮಹಿಳೆಯರ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರದ ಮೇಲ್ವಿಚಾರಕಿ ಮಹಾಲಕ್ಷ್ಮೀ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಅಂಜನಾದೇವಿ, ಅಭಿವೃದ್ಧಿ ಅಧಿಕಾರಿ ರೂಪಾ ಗೋಪಿ, ಕಾರ್ಯದರ್ಶಿ ಶಂಕರ ಆಚಾರ್ಯ, ಕರ ಸಂಗ್ರಾಹಕ ನಾಗರಾಜ ಮತ್ತು ಸಿಬ್ಬಂದಿ ಅಶ್ವಿನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ತಮಗೆ ಸೇರಿದ ಸ್ವತ್ತುಗಳನ್ನು ದರೋಡೆ ಮಾಡಿರುವುದಾಗಿ ಕುಂದಾಪುರದ ಪ್ರಧಾನ ಸಿವಿಲ್ ಜಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ವಕೀಲ ಮಲ್ಯಾಡಿ ಜಯರಾಮ ಶೆಟ್ಟಿ ಅವರ ಮೂಲಕ ಸಲ್ಲಿಸಿದ ಖಾಸಗಿ ದೂರಿನ ಮೇಲೆ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.
ಜಿಲ್ಲಾಡಳಿತದಿಂದ ಗ್ರಾಮ ಪಂಚಾಯಿತಿಗೆ ವರ್ಗಾಯಿಸಿದ ಹಳೆಯ ಕಟ್ಟಡದಲ್ಲಿ ಕೇಂದ್ರ ನಡೆಯುತ್ತಿತ್ತು. ಅದರಲ್ಲಿ 20 ಹೊಲಿಗೆ ಯಂತ್ರಗಳು, ಪೀಠೋಪಕರಣಗಳು ಮತ್ತು ಕೇಂದ್ರಕ್ಕೆ ಅಗತ್ಯವಾದ ಬೆಲೆ ಬಾಳುವ ಅನ್ಯ ಪರಿಕರಗಳಿದ್ದುವು. ಅ.10ರ ಬೆಳಿಗ್ಗೆ ತಾವು ಕೇಂದ್ರಕ್ಕೆ ಬಂದು ನೋಡಿದಾಗ ಅದರ ಬೀಗ ಬದಲಾಯಿಸಲಾಗಿತ್ತು ಮತ್ತು ಒಳಗಿದ್ದ ಸಾಮಾಗ್ರಿಗಳನ್ನು ಒಯ್ಯಲಾಗಿತ್ತು. ಹತ್ತಿರದ ನಿವಾಸಿ ಮಂಜುನಾಥ ಗಾಣಿಗ ದೂರಿನಲ್ಲಿ ಹೆಸರಿಸಲಾದವರು ರಾತ್ರಿ ಬಂದು ಬಲಪ್ರಯೋಗಿಸಿ ಬೀಗ ಮುರಿದು ಸ್ವತ್ತುಗಳನ್ನು ಲಾರಿಯಲ್ಲಿ ಸಾಗಿಸಿದ ವಿಚಾರ ತಿಳಿಸಿದರು ಎಂದು ಆರೋಪಿಸಿದ್ದರು.
ದೂರನ್ನು ಪರಿಗಣಿಸಿದ ನ್ಯಾಯಾಲಯವು, ಸಾಮಗ್ರಿಗಳನ್ನು ಶೋಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲು ವಕೀಲ ಶಾನ್ಕಟ್ಟು ಉಮೇಶ ಶೆಟ್ಟಿ ಅವರನ್ನು ಕಮಿಷನರ್ ಆಗಿ ನೇಮಕ ಮಾಡಿದ್ದ, ಅವರು ವಂಡ್ಸೆಯ ಕಟ್ಟಡವೊಂದರಲ್ಲಿ ಇಡಲಾಗಿದ್ದ ಸಾಮಗ್ರಿಗಳನ್ನು ಮತ್ತು ಅವುಗಳನ್ನು ಸಾಗಿಸಲು ಬಳಸಿದ ಲಾರಿಯನ್ನು ಬುಧವಾರ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಗುರುವಾರ ಮಹಾಲಕ್ಷ್ಮೀ ಸಲ್ಲಿಸಿದ ಇನ್ನೊಂದು ಅರ್ಜಿಯನ್ನು ಮನ್ನಿಸಿದ ನ್ಯಾಯಾಲಯ ಎಲ್ಲ ಸಾಮಗ್ರಿಗಳನ್ನು ಅವರಿಗೆ ಹಿಂತಿರುಗಿಸುವಂತೆ ಮತ್ತು ಕೃತ್ಯದ ಕುರಿತು ತನಿಖೆ ನಡೆಸುವಂತೆ ಕುಂದಾಪುರ ಎಎಸ್ಪಿ ಅವರಿಗೆ ಆದೇಶ ನೀಡಿದೆ.