ಮಂಗಳೂರು, ನ. 06 (DaijiworldNews/MB) : ''ಪ್ರಸ್ತುತ ಆರ್ಥಿಕತೆಯು ತಾತ್ಕಾಲಿಕವಾಗಿ ಕುಸಿತ ಕಂಡಿದೆ. 2021 ರಲ್ಲಿ ಮತ್ತೆ ಪುಟಿದೇಳುತ್ತದೆ'' ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಗುರುವಾರ ಹೇಳಿದರು.
ರಾಜ್ಯ ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ''ವಿಶ್ವಬ್ಯಾಂಕ್ ಪ್ರಕಾರ ಮುಂದಿನ ವರ್ಷ ಜಿಡಿಪಿ ಬೆಳವಣಿಗೆಯು ಶೇಕಡಾ 8.5 ಕ್ಕೆ ಏರಿಕೆಯಾಗಲಿದೆ. ಭಾರತದ ಜಿಡಿಪಿ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಜಿಡಿಪಿ ಆಗಲಿದೆ'' ಎಂದು ಹೇಳಿದ್ದಾರೆ.
"2019 ರಲ್ಲಿ ನಿರುದ್ಯೋಗ ದರವು ಸುಮಾರು 7.19 ಆಗಿತ್ತು. ಈ ವರ್ಷ ನಿರುದ್ಯೋಗ ದರವು 6.67 ಕ್ಕೆ ಇಳಿದಿದೆ. ರೈಲ್ವೆ ಬೋಗಿಗಳ ಉತ್ಪಾದನೆ ಹೆಚ್ಚಾಗಿದೆ. ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಅಕ್ಕಿ ಮತ್ತು ಗೋಧಿ ನೀಡಲು ಸರ್ಕಾರ 80 ಕೋಟಿ ರೂ. ವಿನಯೋಗಿಸಿದೆ. ಪ್ರಧಾನ್ ಮಂತ್ರಿ ಜನಧನ ಯೋಜನೆ ಅಡಿಯಲ್ಲಿ ಸರ್ಕಾರ 20.6 ಕೋಟಿ ರೂ. ನೀಡಲಾಗಿದೆ. ಮುದ್ರಾ ಯೋಜನೆ, ಪಿಎಂ ಕಿಸಾನ್ ಸಮ್ಮನ್ ಯೋಜನೆ ಅಡಿಯಲ್ಲಿ ಹಾಗೂ ಕೊರೊನಾ ಸವಾಲುಗಳನ್ನು ಎದುರಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ 11,002 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ'' ಎಂದು ವಿವರಿಸಿದರು.
ನಿರುದ್ಯೋಗ ದರದ ಕುರಿತು ಮಾತನಾಡಿದ ಅವರು, ''2019 ರ ನಿರುದ್ಯೋಗ ದರವು 6.67% ಕ್ಕೆ ಇಳಿದಿದೆ'' ಎಂದು ಹೇಳಿದರು. ಹಾಗೆಯೇ ''ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರದಿಂದ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ'' ಎಂದರು.