ಹಳೆಯಂಗಡಿ, ನ. 06 (DaijiworldNews/HR): ಕಾಂಗ್ರೆಸ್ ನೇತೃತ್ವವನ್ನು ರಾಜರಾಜೇಶ್ವರಿ ನಗರದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಶಿರಾದಲ್ಲಿ ಸಿದ್ಧರಾಮಯ್ಯ ವಹಿಸಿಕೊಂಡಿದ್ದು, ಅವರಿಬ್ಬರಿಗೂ ಒಬ್ಬರನೊಬ್ಬರು ಸೋಲಿಸಬೇಕೆಂಬ ಕಾರಣದಿಂದ ಈ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ನಗರ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ಮತ್ತು ಶಿರಾ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆದ್ದರೂ ಸಹ ಅಲ್ಲಿ ಅಭಿವೃದ್ಧಿಯ ನಡೆ ಹಿಂದೆ ಉಳಿದಿದೆ. ಹಾಗಾಗಿ ಮತದಾರರು ಈ ಬಾರಿ ಬಿಜೆಪಿಯನ್ನು ಗೆಲ್ಲಿಸಲು ವಿಶ್ವಾಸದ ಮತಗಳನ್ನು ಹಾಕಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಹಾಗೂ ತಾಲೂಕು, ಜಿಲ್ಲಾ ಪಂಚಾಯತ್ನ ಚುನಾವಣೆಗೆ ಈಗಾಗಲೇ ಬಿಜೆಪಿ ಸಿದ್ಧತೆಯನ್ನು ಮಾಡಿಕೊಂಡಿದ್ದು, ರಾಜ್ಯದಲ್ಲಿ ಶೇ.80 ರಷ್ಟು ಸ್ಥಾನಗಳು ಬಿಜೆಪಿಗೆ ಸಿಗಲಿರುವ ವಿಶ್ವಾಸ ನನಗಿದೆ ಎಂದರು.