ಉಡುಪಿ, ನ.06 (DaijiworldNews/PY): "ಇಂದು ಎಲ್ಲವೂ ರಾಜಕೀಯವಾಗುತ್ತಿದೆ. ಹಿಂದೆ ಯುಪಿಎ ಸರ್ಕಾರವಿದ್ದಾಗ ಜಗನ್ಮೋಹನ ರೆಡ್ಡಿ ಇದ್ದಾಗ ವರ್ಷಕಟ್ಟ್ಲೆ ಜೈಲಲ್ಲಿ ಹಾಕಿದ್ದರು, ಆಗ ನಾವ್ಯಾರು ಸಿಬಿಐನ ಬಣ್ಣ ಹಚ್ಚಿಲ್ಲ" ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬಂಧನ ವಿಚಾರವಾಗಿ, "ಇಂದು ಎಲ್ಲವೂ ರಾಜಕೀಯವಾಗುತ್ತಿದೆ. ಹಿಂದೆ ಯುಪಿಎ ಸರ್ಕಾರವಿದ್ದಾಗ ಜಗನ್ಮೋಹನ ರೆಡ್ಡಿ ಇದ್ದಾಗ ವರ್ಷಕಟ್ಟ್ಲೆ ಜೈಲಲ್ಲಿ ಹಾಕಿದ್ದರು. ಆಗ ನಾವ್ಯಾರು ಸಿಬಿಐನ ಬಣ್ಣ ಹಚ್ಚಿಲ್ಲ. ಜನಾರ್ಧನ ರೆಡ್ಡಿ ಅರೆಸ್ಟ್ ಆದಾಗಲೂ ಬಿಜೆಪಿ ಏನೂ ಅಂದಿಲ್ಲ. ಸಿಬಿಐ ಒಂದು ಸ್ವತಂತ್ರ ಸಂಸ್ಥೆ, ಅವರಿಗೆ ಬೇಕಾದ ಹಾಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ತನಿಖೆ ಮಾಡುತ್ತಾ ಇದ್ದಾರೆ. ತನಿಖೆ ಮಾಡಲು ಬಿಡಿ, ತಪ್ಪಿಲ್ಲಾಂದ್ರೆ ಹೆದರುವ ಕಾರಣ ಇಲ್ಲ. ಇತ್ತಿಚೆಗೆ ಕಾಂಗ್ರೆಸ್ ನಾಯಕರ ಮೇಲೆ ಸಿಬಿಐ ತನಿಖೆ ಆದರೆ ಮತ್ತೆ ಬಿಜೆಪಿಯ ಮೇಲೆ ಅದೇ ಪಟ್ಟಿಯನ್ನು ಕಟ್ಟುತ್ತಾರೆ" ಎಂದು ಜಗದೀಶ ಶೆಟ್ಟರ್ ಟೀಕಿಸಿದರು.
ಅವರು ಇಂದು ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, "ಈ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಜೈಲಿಗೆ ಹೋಗಿ, ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ಮೇಲಿನ ಯಾವ ಕೇಸು ಖುಲಾಸೆಯಾಗಿಲ್ಲ. ಅವರು ಮೊದಲ ಬಾರಿ ಶಾಸಕರಾಗಿದ್ದಾಗ ಎಷ್ಟು ಆಸ್ತಿ ಇತ್ತು, ಈಗ ಎಷ್ಟು ಆಸ್ತಿ ಇದೆ? ಮಾಹಿತಿ ಕೊಡಿ. ಸರಿಯಾದ ರೀತಿಯಲ್ಲಿ ಅದನ್ನ ಗಳಿಸಿದ್ದರೆ, ಮತ್ತೆ ಹೆದರುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿಲ್ಲ ಎಂದರೆ ಹೆದರುವ ಕಾರಣ ಇಲ್ಲ. ಎಲ್ಲರನ್ನು ಕಾಮಾಲೆ ಕಣ್ಣಿಂದ ನೋಡೋದು ಬಿಟ್ಟು ಬಿಡಿ. ತನಿಖೆಗೆ ಅವಕಾಶ ಕೊಡಿ. ಅಲ್ಲಿ ಹೋಗಿ ಸ್ವಾಮೀಜಿಯವರು ಭೇಟಿ ಆಗಿರುವ ಬಗ್ಗೆ ಮಾಹಿತಿ ಇಲ್ಲ" ಎಂದರು.
"ವಿನಯ್ ಕುಲಕರ್ಣಿ ಕೇಸ್ ಅನ್ನು ಸಿಬಿಐಗೆ ಬಿಟ್ಟು ಬಿಡಲಿ ಅವರು ನೋಡಿ ಕೊಳ್ಳುತ್ತಾರೆ" ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
"ಡಿಕೆಶಿ ದೆಹಲಿ ಪ್ರವಾಸದ ಬಗ್ಗೆ ಸಿದ್ಧರಾಮಯ್ಯನವರ ಮೇಲೆ ಮತ್ತು ಉಪಚುನಾವಣೆಗೆ ಸಹಕಾರ ನೀಡುತ್ತಿಲ್ಲ ಎನ್ನುವ ಬಗ್ಗೆ ದೂರು ನೀಡುವುದಕ್ಕೆ ಮುಂದಾಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರದು ಆಂತರಿಕ ವಿಚಾರ. ಮೊದಲಿಂದಲೂ ಅವರ ನಡುವೆ ಭಿನ್ನಾಭಿಪ್ರಾಯ ಇದ್ದದ್ದೆ. ಸಿದ್ದರಾಮಯ್ಯ ಇನ್ನೊಮ್ಮ ಮುಖ್ಯ ಮಂತ್ರಿಯಾಗಲು ಬಯಸುತ್ತಿದ್ದಾರೆ. ಕೆಲವು ಶಾಸಕರು ಡಿಕೆಶಿ ಮುಖ್ಯಮಂತ್ರಿ ಆಗುವಂತೆ ಬೆಂಬಲಿಸುತ್ತಿದ್ದಾರೆ. ಚುನಾವಣೆ ಒಂದೇ ಕಾರಣಕ್ಕೆ ಜೋಡಿಯಾಗಿ ಹೊರಟಿದ್ದಾರೆ. ಒಳಗೆ ಒಬ್ಬರಿಗೊಬ್ಬರು ಕತ್ತಿ ಮಸೆಯುತ್ತಲೇ ಇದ್ದಾರೆ. ಯಾವಾಗ ಬೇಕಾದರೂ ಹೊಡೆತ ಬೀಳಬಹುದು" ಎಂದು ತಿಳಿಸಿದರು.
ಉಡುಪಿಯಲ್ಲಿ ಸುಜ್ಲೋನ್ ಕಂಪನಿಯು 114 ಎಕ್ರೆ ದೇವರ ಕಾಡನ್ನು ಕಡಿಯಲು ಮುಂದಾಗಿದ್ದು, ತನಿಖೆಗಾಗಿ ತನಿಖಾ ತಂಡ ರಚನೆ ಮಾಡುವುದುದಾಗಿ ಭರವಸೆ ನೀಡಿದ್ದಾರೆ.