ಬೈಂದೂರು, ನ. 06 (DaijiworldNews/MB) : ''ಅಧಿಕಾರ ಮದದಿಂದ ಮುಗ್ದ ಮಹಿಳೆಯರ ಸ್ವಾವಲಂಬಿ ಬದುಕಿನ ಮೇಲೆ ಗದಾಪ್ರಹಾರ ಮಾಡುವುದು ಖಂಡನಾರ್ಹ, ಈ ದೇಶ ಮಹಿಳೆಯರಿಗೆ ವಿಶೇಷ ಮಾನ್ಯತೆ ನೀಡಿದೆ. ಅಸಂಖ್ಯ ಮಹಿಳಾ ಸಾಧಕರು ನಿತ್ಯಸ್ಮರಣೀಯರಾಗಿದ್ದಾರೆ. ಆದರೆ ಇವತ್ತು ಸ್ವಾವಲಂಬನೆಯ ಮೂಲಕ ಜೀವನ ರೂಪಿಸಿಕೊಳ್ಳುತ್ತಿರುವ ಮಹಿಳೆಯರಿಗೆ ಅನಗತ್ಯ ತೊಂದರೆ ನೀಡುವ ಮೂಲಕ ವ್ಯವಸ್ಥೆಯನ್ನೆ ಬುಡಮೇಲು ಮಾಡುತ್ತಿರುವುದು ದುರಂತ. ಮಹಿಳೆಯರ ಸ್ವಾವಲಂಬನಾ ಕೇಂದ್ರದ ದಮನದ ವಿರುದ್ಧ ಜಿಲ್ಲಾ ಪಂಚಾಯತಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ದಿನ ದೂರವಿಲ್ಲ'' ಎಂದು ಮಾಜಿ ಸಂಸದ ವಿನಯ ಕುಮಾರ ಸೊರಕೆ ಹೇಳಿದರು.
ಅವರು ಶುಕ್ರವಾರ, ವಂಡ್ಸೆ ಎಸ್.ಎಲ್.ಆರ್.ಎಂ ಅಧೀನ ಸಂಸ್ಥೆಯಾದ ಸ್ವಾವಲಂಬನಾ ಹೊಲಿಗೆ ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ತೆರವು ಮಾಡಿರುವುದನ್ನು ಖಂಡಿಸಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಆಶ್ರಯದಲ್ಲಿ ಬೈಂದೂರಿನಲ್ಲಿ ನಡೆದ ಸರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು.
''ಪ್ರಧಾನಿ ನರೇಂದ್ರ ಮೋದಿಯವರ ಆಶಯಕ್ಕೆ ಇಲ್ಲಿನ ಶಾಸಕರು ವಿರೋಧ ಮಾಡುತ್ತಿರುವುದು ಆಶ್ಚರ್ಯ ಮೂಡಿಸುತ್ತದೆ. ಇದು ಇಡೀ ಮಹಿಳಾ ಸಮುದಾಯಕ್ಕೆ ಆದ ಹಿನ್ನೆಡೆ. ಸ್ವಾವಲಂಬನೆಗೆ ಒತ್ತು ನೀಡಿ ಪ್ರೋತ್ಸಾಹಿಸಬೇಕಾದ ವ್ಯವಸ್ಥೆ ಅದನ್ನು ಹಿಸುಕಿ ಹಾಕುತ್ತಿರುವುದು ಖಂಡನಾರ್ಹ ಎಂದ ಅವರು, ದೇಶದಲ್ಲಿ ಕೋರೊನಾ ಲಾಕ್ ಡೌನ್ ಸಮಯದಲ್ಲಿ ಕೇಂದ್ರಬ ಸರ್ಕಾರ ತಗೆದುಕೊಂಡ ನಿಲುವುಗಳು ವಲಸೆ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ ತುಂಬಾ ಸಮಸ್ಯೆಯಾಯಿತು. ಇವತ್ತು ಕರ್ನಾಟಕದಲ್ಲಿ ಸಿದ್ಧರಾಮಯ್ಯನವರ ಸರ್ಕಾರ ಜ್ಯಾರಿಗೆ ತಂದಂತಹ ಅನ್ನಭಾಗ್ಯ ಕಾರ್ಯಕ್ರಮ ಜನರ ನೆರವಿಗೆ ಬಂತು. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಮಹತ್ವಕಾಂಕ್ಷಿ ಆಶಾ ಕಾರ್ಯಕ್ರಮದ ಆಶಾ ಕಾರ್ಯಕರ್ತೆಯರು ಒಳ್ಳೆಯ ಸೇವೆ ನೀಡಿದರು. ಆದರೆ ಕರ್ನಾಟಕದಲ್ಲಿ ಕೊರೋನಾದ ಸಂದರ್ಭದಲ್ಲಿಯೂ ಭೃಷ್ಟಚಾರದ ಆರೋಪ ಕೇಳಿ ಬರುತ್ತಿದೆ. ದೇಶ ಇವತ್ತು ಜಿಡಿಪಿಯಲ್ಲಿ ಪಾತಾಳಕ್ಕೆ ಕುಸಿದಿದೆ. ಎಲ್ಲ ಕ್ಷೇತ್ರದಲ್ಲಿಯೂ ಖಾಸಗೀಕರಣ ಲಗ್ಗೆ ಇಡುತ್ತಿದೆ. ನಿರುದ್ಯೋಗ ಹೆಚ್ಚಳವಾಗುತ್ತಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ'' ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ''ದೇಶಕ್ಕೆ ಮಾದರಿಯಾದ ವಂಡ್ಸೆ ಪಂಚಾಯತ್ನ ಎಸ್.ಎಲ್.ಆರ್.ಎಂ ಅಂಗ ಸಂಸ್ಥೆಯಾದ ಸ್ವಾವಲಂಬನಾ ಕೇಂದ್ರದ ಕಾನೂನು ಬಾಹಿರ ತೆರವು ಮಾಡಿದ ಫಲ ಸಂಬಂಧಪಟ್ಟವರು ಅನುಭವಿಸುತ್ತಾರೆ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ರಾಜಕೀಯ ದ್ವೇಷಕ್ಕೆ ಗ್ರಾಮದ ಹಿತಾಸಕ್ತಿಯನ್ನು ಹಾಳುಮಾಡುವುದು ಒಳ್ಳೆಯ ನಡೆಯಲ್ಲ. ಇದಕ್ಕೆಲ್ಲಾ ನ್ಯಾಯಾಂಗ ಸರಿಯಾದ ತೀರ್ಪು ನೀಡಲಿದೆ'' ಎಂದರು.
''ಯುವ ಕಾಂಗ್ರೆಸ್ ನಾಯಕ ವಿಕಾಸ್ ಹೆಗ್ಡೆ ಮಾತನಾಡಿ, 7ದಿನ ಕಾಲವಕಾಶವನ್ನು ಆವತ್ತು ಅಧಿಕಾರಿಗಳು ನೀಡಿದ್ದರೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ಶಾಸಕರ ಒತ್ತಡಕ್ಕೆ ಕಟ್ಟುಬಿದ್ದ ಕಾನೂನು ಚೌಕಟ್ಟು ಮೀರಿ ವ್ಯವರಿಸಿದ ಐವರು ಅಧಿಕಾರಿಗಳಿಗೆ ನ್ಯಾಯಾಲಯ ತನಿಖೆಗೆ ಆದೇಶಿಸಿದೆ. ಕಾನೂನು ಪ್ರಕಾರವಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ. ತಾರ್ಕಿಕವಾಗಿ ಸರಣಿ ಸತ್ಯಾಗ್ರಹಕ್ಕೆ ಅಂತ್ಯ ಲಭಿಸಿದರೂ ಕೂಡಾ ಹಕ್ಕು ಸಮಿತಿ, ನ್ಯಾಯಾಲಯಗಳಲ್ಲಿ ಮಹಿಳೆಯರಿಗೆ ಜಯ ತಂದುಕೊಡುವಲ್ಲಿ ಹೋರಾಟ ಮುಂದುವರಿಸುತ್ತೇವೆ'' ಎಂದರು.
''ಬೈಂದೂರು ಕ್ಷೇತ್ರದಲ್ಲಿ ಇಂದು ಸಾಮಾಜಿಕ ನ್ಯಾಯ ಸತ್ತು ಹೋಗಿದೆ. ಕ್ಷೇತ್ರದ ಶಾಸಕರಲ್ಲಿ ಮಾಹಿತಿ ಇಲ್ಲ. ಅವರು ಶಾಲೆಗೆ ಸೇರಬೇಕಾದ ಅವಶ್ಯಕತೆ ಇದೆ. ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಜಿಲ್ಲೆಗೆ ಸಿಗುವ ಯೋಜನೆಗಳು. ಇದನ್ನು ಒಂದು ಕ್ಷೇತ್ರಕ್ಕೆ ತರುತ್ತೇನೆ ಎನ್ನುವ ಮೂಲಕ ಜನರಿಗೆ ಮಂಕುಬೂದಿ ಎರಚಿದ್ದಾರೆ. ಪರೇಶ ಮೇಸ್ತ ಅನುಮಾನಸ್ಪದ ಸಾವಿನ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಬೈಂದೂರಿನಿಂದ ಗಂಗೊಳ್ಳಿಯ ತನಕ ಆ ಮುಗ್ದ ತಂದೆತಾಯಿಗಳನ್ನು ಮೆರವಣಿಗೆ ಮಾಡಿದರು. ಚುನಾವಣೆಯಲ್ಲಿ ಗೆದ್ದ ಬಳಿಕ ಪರೇಶ ಮೇಸ್ತರ ತಂದೆ ತಾಯಿಗಳು ಹೇಗಿದ್ದಾರೆ ಎಂದು ಕೂಡಾ ಕ್ಷೇತ್ರದ ಶಾಸಕರು ನೋಡಲಿಲ್ಲ. ಈಗ ನಿಮ್ಮದೇ ಸರ್ಕಾರವಿದೆಯಲ್ಲ, ಸಿಬಿಐ ತನಿಖೆ ಏನಾಗಿದೆ ಸ್ವಾಮಿ?'' ಎಂದು ಪ್ರಶ್ನಿಸಿದರು.
ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಬೈಂದೂರು ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಕುಂದಾಪುರ ಬ್ಲಾಕ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ ಶೆಟ್ಟಿ ಗುಡಿಬೆಟ್ಟು, ಯುವ ಕಾಂಗ್ರೆಸ್ನ ಶೇಖರ ಪೂಜಾರಿ, ಸಂತೋಷ ಕುಮಾರ ಶೆಟ್ಟಿ ಬಲಾಡಿ, ನಾಗರಾಜ ಗಾಣಿಗ ಬೈಂದೂರು, ತಾ.ಪಂ.ಸದಸ್ಯರಾದ ಜಗದೀಶ ದೇವಾಡಿಗ, ವಾಸುದೇವ ಪೈ, ಪಿ.ಎಲ್.ಜೋಷ್, ತಾಲೂಕು ಡಿಎಸ್ಎಸ್ನ ಗೀತಾ ಸುರೇಶ್, ತಾಲೂಕು ಅಂಬೇಡ್ಕರ್ ಸಂಘದ ಲಕ್ಷಣ, ಸ್ವಾವಲಂಬನಾ ಕೇಂದ್ರದ ಮಹಿಳೆಯರು ಸರಣಿ ಸತ್ಯಗ್ರಹದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ ಸ್ವಾಗತಿಸಿದರು.