ಮಂಗಳೂರು, ನ. 06 (DaijiworldNews/SM-MB) : ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ದೇಶ ವಿದೇಶದಲ್ಲಿರುವವರಿಗೆ ಮನೋರಂಜನೆ ನೀಡುವ ಸಲುವಾಗಿ ದಾಯ್ಜಿವಲ್ಡ್ ಟಿವಿಯಲ್ಲಿ ಆರಂಭಗೊಂಡ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮ ಎಲ್ಲೆಲ್ಲೂ ಮನೆ ಮನ ಗೆದ್ದಿದೆ. ತುಳುನಾಡಿನ ಹಾಸ್ಯ ಕಲಾವಿದರಾದ ಅರವಿಂದ ಬೋಳಾರ್ ಹಾಗೂ ದಾಯ್ಜಿವಲ್ಡ್ ಸಂಸ್ಥೆಯ ಪ್ರಧಾನ ಸಂಪಾದಕರಾದ ವಾಲ್ಟರ್ ನಂದಳಿಕೆಯವರು ಆರಂಭಿಸಿದ ಪ್ರೈವೇಟ್ ಚಾಲೇಂಜ್ ಇದೀಗ 25 ನೇ ಸಂಚಿಕೆಯತ್ತ ಹೆಜ್ಜೆ ಇರಿಸಿದೆ.
ಸದಾ ವಿಭಿನ್ನ ಆಲೋಚನೆ, ಹೊಸ ಕಥಾ ಹಂದರ, ಡಿಫ್ರೆಂಟ್ ಲುಕ್ ಮೂಲಕ ಜನ ಮಾನಸದಲ್ಲಿ ಹೆಸರು ಗಳಿಸಿರುವ ಪ್ರೈವೇಟ್ ಚಾಲೇಂಜ್ ಕಾರ್ಯಕ್ರಮ ಪ್ರತಿ ರವಿವಾರದಂದು ರಾತ್ರಿ 9 ರಿಂದ 10 ಗಂಟೆಯವರೆಗೆ ದಾಯ್ಜಿವಲ್ಡ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಆರಂಭದಿಂದಲೂ ಕರಾವಳಿಯ ಪ್ರತಿಯೊಬ್ಬರನ್ನು ಸೆಳೆಯುತ್ತಾ ಬಂದಿದೆ. ಕೊರೊನಾ ಸೋಂಕಿನ ಆತಂಕವಿದ್ದ ಆರಂಭದ ದಿನಗಳಲಂತೂ ಈ ಕಾರ್ಯಕ್ರಮ ಕಡಲ ತಡಿಯ ಜನತೆಗೆ ಹೊಸ ಹುರುಪನ್ನು ತುಂಬಿದೆ. ಅಷ್ಟೇ ಅಲ್ಲದೇ ರಾಜಕೀಯ, ಸಾಮಾಜಿಕ ವಿಚಾರಗಳನ್ನೂ ಜನರ ಮುಂದಿರಿಸುತ್ತಿದೆ.
ಈ ಕಾರ್ಯಕ್ರಮವನ್ನು ಜನರು ಎಷ್ಟರ ಮಟ್ಟಿಗೆ ನೆಚ್ಚಿಕೊಂಡಿದ್ದಾರೆ ಎಂದರೆ ರವಿವಾರ ಬರುತ್ತಿದ್ದಂತೆ ತುಳುನಾಡಿನಲ್ಲಿರುವ ಜನರ ಬಾಯಿಯಲ್ಲಿ ಬರುವ ಒಂದೇ ಮಾತು, ''ಅರವಿಂದಣ್ಣ ಬೊಕ್ಕ ವಾಲ್ಟರಣ್ಣನ ಅಯ್ತಾರ ರಾತ್ರೆ 9 -10 ಗಂಟೆಗ್ ಕಾಮೀಡಿ ತಪ್ಪಂದೆ ತೂವೊಂದುಲ್ಲ'' ಎಂಬುದಾಗಿದೆ. ಬಹುತೇಕ ಜನರು ಸಾಮಾಜಿಕ ತಾಣದ ಮೂಲಕ ಅಥವಾ ಟಿವಿಯ ಮೂಲಕ ಈ ಕಾರ್ಯಕ್ರಮವನ್ನು ತಪ್ಪದೆ ವೀಕ್ಷಿಸುತ್ತಿರುವುದು ಕಾರ್ಯಕ್ರಮದ ಯಶಸ್ವಿಗೆ ಹಿಡಿದ ಕೈಗನ್ನಡಿಯಾಗಿದೆ.
ದೈನಂದಿನ ಆಗುಹೋಗುಗಳನ್ನೇ ಆಯ್ದುಕೊಂಡು ಹೊಸತನದಿಂದ ಕೂಡಿದ ಅಲೋಚನೆಗಳನ್ನು ಬೆರೆಸಿ, ನವೀನ ವೇಷಭೂಷಣಗಳೊಂದಿಗೆ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಗುತ್ತಿದ್ದು ಪ್ರೇಕ್ಷಕರ ಅಭಿರುಚಿಯ ಕಲಾವಿದ ಹಾಗೂ ನಿರೀಕ್ಷೆಯ ಪ್ರದರ್ಶನವೇ ಯಶಸ್ಸಿನ ಮೆಟ್ಟಿಲಾಗಲು ಕಾರಣವಾಗಿದೆ. ಮೈ ತುಂಬಾ ಹಾಸ್ಯ, ಮಾತಿನಲ್ಲೇ ನಗು ತುಂಬಿಕೊಂಡಿರುವ ತುಳುನಾಡಿನ ಹಾಸ್ಯ ಕಲಾವಿದ ಅರವಿಂದ್ ಬೋಳಾರ್ ಅವರು ಇರುವ ನಿಟ್ಟಿನಲ್ಲೇ ಈ ಕಾರ್ಯಕ್ರಮವನ್ನು ವಿಕ್ಷೀಸಲು ಜನರು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಅದೆಷ್ಟೋ ಅಭಿಮಾನಿ ವರ್ಗ ಒಂದಲ್ಲ ಒಂದು ದಿನ ಅವರೊಂದಿಗೆ ಈ ಕಾರ್ಯಕ್ರಮದಲ್ಲಿ ಮಾತನಾಡಬೇಕೆಂಬ ಹಂಬಲವನ್ನು ಹೊಂದಿದ್ದಾರೆ. ವೀಕ್ಷಕರ ಮನದಿಂಗಿತ ಅರಿತ ಆಯೋಜಕರು ಇದೀಗ ೨೫ನೇ ಸಂಚಿಕೆಯನ್ನು ಲೈವ್ ಪ್ರದರ್ಶನದ ಮೂಲಕ ಮನರಂಜಿಸಲು ಸಿದ್ಧರಾಗಿದ್ದಾರೆ.
ಜನ ಮೆಚ್ಚುಗೆಗೆ ಪಾತ್ರವಾಗಿರುವ ಈ ಕಾರ್ಯಕ್ರಮವು ಈಗ ತನ್ನ 25ನೇ ಸಂಚಿಕೆಯತ್ತ ಮುಖ ಮಾಡಿದೆ. ಈ ನಿಟ್ಟಿನಲ್ಲಿ ನವೆಂಬರ್ 8 ರ ರವಿವಾರದಂದು ಮೂಡಿಬರುವ ಕಾರ್ಯಕ್ರಮ ಬಹಳ ವಿಶೇಷವಾಗಿರಲಿದೆ. ಈವರೆಗೆ ರವಿವಾರದಂದು ರಾತ್ರಿ 9 ರಿಂದ 10 ಗಂಟೆಯವರೆಗೆ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಈ ರವಿವಾರ ವಿಭಿನ್ನವಾಗಿರಲಿದ್ದು ರಾತ್ರಿ 8:30 ರಿಂದ 10 ಗಂಟೆಯವರೆಗೆ ಲೈವ್ ಕಾರ್ಯಕ್ರಮದಲ್ಲಿ ಅರವಿಂದ್ ಬೋಳಾರ್ ಹಾಗೂ ವಾಲ್ಟರ್ ನಂದಳಿಕೆಯವರು ತಮ್ಮೊಂದಿಗೆ ಮಾತನಾಡಲು ಸಜ್ಜಾಗಿದ್ದಾರೆ. ಬೋಳಾರ್ ಅಭಿಮಾನಿಗಳು ಕರೆ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಾಗಿದೆ. ಹಾಗೆಯೇ ಮುಂದಿನ ಕಾರ್ಯಕ್ರಮ ಹೇಗೆ ಇರಬೇಕು ಎಂಬ ಅಭಿಪ್ರಾಯವನ್ನು ಪ್ರೇಕ್ಷಕರು ನೀಡಬಹುದಾಗಿದೆ.