ಉಡುಪಿ, ನ. 05 (DaijiworldNews/SM): ಜಿಲ್ಲೆಯ ಪಡುಬಿದ್ರಿ ಠಾಣೆ ವ್ಯಾಪ್ತಿಯಲ್ಲಿ ಈಜಲು ಹೊಳೆಗೆ ಇಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹೆಜಮಾಡಿಯಲ್ಲಿ ನವಂಬರ್ 05ರ ಗುರುವಾರ ಸಂಜೆ ನಡೆದಿದೆ.
ಹೆಜಮಾಡಿ ಎನ್.ಎಸ್. ರಸ್ತೆಯ ಮೊಹ್ಸಿನ್(16) ಹಾಗೂ ಎಸ್.ಎಸ್.ರಸ್ತೆ ನಿವಾಸಿ ಮುಹಮ್ಮದ್ ರಾಯಿಸ್(16) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಪಡುಬಿದ್ರಿ ಹೆಜಮಾಡಿ ಕಾಮಿನಿ ಹೊಳೆ ಹಾಗೂ ಸಮುದ್ರ ಸೇರುವ ಮುಟ್ಟಲಿವೆ ಬಳಿ ಮೂವರು ಯುವಕರು ನೀರಿಗಿಳಿದು ಈಜಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ನಂತರ ಇದನ್ನು ಕಂಡ ಮಹಿಳೆಯೋರ್ವರು ಸ್ಥಳೀಯರಿಗೆ ಮಾಹಿತಿ ನೀಡಿದ್ದು ಮಾಹಿತಿ ತಿಳಿದ ತಕ್ಷಣ ಮೂವರನ್ನು ಮೇಲಕ್ಕೆತ್ತಲಾಗಿದೆ. ಆದರೆ, ಓರ್ವ ಅದಾಗಲೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮುಹಮ್ಮದ್ ನಬೀಲ್ ಎಂಬಾತ ಅಪಾಯದಿಂದ ಪಾರಾಗಿದ್ದಾನೆ.
ಇನ್ನು ಸುದ್ದಿ ತಿಳಿದು ಪಡುಬಿದ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.