ಉಳ್ಳಾಲ, ನ. 05 (DaijiworldNews/SM): ಉಳ್ಳಾಲವನ್ನು ಪಾಕಿಸ್ತಾನವೆಂದಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಸ್ ಡಿಪಿಐ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮನವಿ ಮಾಡಲಾಗಿದೆ.
ಕೇಸು ದಾಖಲಿಸದಿದ್ದಲ್ಲಿ ಠಾಣೆ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಎಸ್ ಡಿಪಿಐ ಮುಂದಿಟ್ಟಿದೆ. ಎಸ್ ಡಿಪಿಐ ಕಿನ್ಯ ಗ್ರಾಮ ಸಮಿತಿ ಸದಸ್ಯ ನೌಫಲ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೋಮು ಪ್ರಚೋದನೆ ಮತ್ತು ದೇಶ ದ್ರೋಹ ಪ್ರಕರಣದ ದೂರು ನೀಡಿದ್ದಾರೆ.
ನ.1 ರಂದು ಕಿನ್ಯಾದ ಕೇಶವ ಶಿಶು ಮಂದಿರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್, ಉಳ್ಳಾಲವನ್ನು ಪಾಕಿಸ್ತಾನದ ಭಾಗವಾಗಿದೆ ಎಂದಿದ್ದರು. ಆದುದರಿಂದ ಈ ಪ್ರದೇಶದಲ್ಲಿ ದೈವಸ್ಥಾನ ಮತ್ತು ಸಂಸ್ಕೃತಿಯನ್ನು ಉಳಿಸುವವರು ಯಾರು ಎಂದು ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಮಾತ್ರವಲ್ಲದೆ ಉಳ್ಳಾಲ ಪ್ರದೇಶದಲ್ಲಿ ಅಶಾಂತಿ ಸೃಷ್ಠಿ ಮಾಡಿ ಪರಸ್ಪರ ಎರಡು ಕೋಮುಗಳ ನಡುವೆ ವೈರತ್ವ ಉಂಟಾಗುವಂತೆ ಮಾಡಿ ಅಶಾಂತಿಗೆ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.