ಮಂಗಳೂರು, ನ.05 (DaijiworldNews/PY): "ಚಿತ್ರಮಂದಿರಗಳಲ್ಲಿ ಚಲನಚಿತ್ರ ವೀಕ್ಷಿಸಲು ಬರುವ ಸಾರ್ವಜನಿಕರು ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಕೊರೊನಾ ಸೋಂಕು ತಡೆಗಟ್ಟುವುದು ಹಾಗೂ ಕರ್ನಾಟಕ ಸಿನಿಮಾ ರೆಗ್ಯುಲೇಶನ್ ನಿಯಮಗಳ ಪಾಲನೆಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
"ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಚಲನಚಿತ್ರ ಪ್ರದರ್ಶನಕ್ಕೆ ಮೊದಲ ಕಾರ್ಯನಿರ್ವಹಣಾ ಪ್ರಕ್ರಿಯೆಯನ್ನು ನೀಡಿದ್ದು ಇವುಗಳನ್ನು ಚಲನಚಿತ್ರ ಮಂದಿರದ ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕು. ಚಿತ್ರಮಂದಿರಗಳು ಮಲ್ಟಿಫ್ಲೆಕ್ಸ್ನಲ್ಲಿರುವ ಆಸನದ ಒಟ್ಟು ಸಾಮರ್ಥ್ಯದ ಶೇ. 50%ರಷ್ಟು ಸಂಖ್ಯೆಯ ಪ್ರೇಕ್ಷಕರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಬೇಕು" ಎಂದು ಸೂಚಿಸಿದರು.
"ಪ್ರವೇಶ ದ್ವಾರದಲ್ಲಿ ಪ್ರೇಕ್ಷಕರು, ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಸ್ಕ್ಯಾನಿಂಗ್ ಮಾಡಬೇಕು, ಪ್ರೇಕ್ಷಕರು ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಚಿತ್ರಮಂದಿರಗಳು ಮಾಡಬೇಕೆಂದು" ತಿಳಿಸಿದರು.
"ಜನದಟ್ಟಣೆಯನ್ನು ನಿರ್ಬಂಧಿಸುವ ದೃಷ್ಠಿಯಿಂದ ನಿರ್ಗಮದ ದ್ವಾರದಲ್ಲಿ ಸಾಲುವಾರು ನಿರ್ಗಮನವನ್ನು ಅನುಸರಿಸತಕ್ಕದ್ದು, ಚಿತ್ರಮಂದಿರದ ಆವರಣ ಹಾಗೂ ಜನಸಾಮಾನ್ಯರ ಸಂಪರ್ಕಕ್ಕೆ ಬರುವಂಥ ಎಲ್ಲಾ ಸ್ಥಳಗಳನ್ನು ಸ್ಯಾನಿಟೈಸ್ ಮಾಡುವುದರೊಂದಿಗೆ ಶುಚಿತ್ವವನ್ನು ಕಾಪಾಡಬೇಕು" ಎಂದರು.
"ಟಿಕೆಟ್ ಬುಕ್ಕಿಂಗ್ ಸೇರಿದಂತೆ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಡಿಜಿಟಲ್ ಪೇಮೆಂಟ್ ವಹಿವಾಟಿಗೆ ಆದ್ಯತೆ ನೀಡಬೇಕು. ಚಲನಚಿತ್ರ ಮಂದಿರಗಳಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಯಾವುದೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಕೊರೊನಾ ಮಾರ್ಗಸೂಚಿಗಳು ಉಲ್ಲಂಘನೆ ಆದಲ್ಲಿ ಚಿತ್ರಮಂದಿರದ ಮಾಲಕರನ್ನು ಹೊಣೆಗಾರರನ್ನಾಗಿಸಲಾಗುವುದು" ಎಂದು ತಿಳಿಸಿದರು.
ಸಭೆಯಲ್ಲಿ ಪೊಲೀಸ್ ಆಯುಕ್ತರು, ಮಂಗಳೂರು ಮಹಾನಗರ, ಮಂಗಳೂರು ಪೊಲೀಸ್ ಅಧೀಕ್ಷಕರು, ದಕ್ಷಿಣಕನ್ನಡ ಜಿಲ್ಲೆ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ದ.ಕ ಮಂಗಳೂರು ಇತರ ಅಧಿಕಾರಿಗಳಿಗೆ ಹಾಗೂ ಎಲ್ಲಾ ಚಿತ್ರಮಂದಿರದ ಮಾಲೀಕರು ಉಪಸ್ಥಿತರಿದ್ದರು.