ಮಂಗಳೂರು, ನ. 05 (DaijiworldNews/MB) : ಮಂಗಳೂರಿನಲ್ಲಿ ಗುರುವಾರ ಬಿಜೆಪಿಯ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಬಿಜೆಪಿಯ ಕೇಂದ್ರ ರಾಜ್ಯ ನಾಯಕರು ಆಗಮಿಸಿದ್ದಾರೆ. ಆದರೆ ಇವರೆಲ್ಲರ ನಡುವೆ ಸಭೆಯಲ್ಲಿ ಬಳಸಲಾಗುತ್ತಿದ್ದ ತಾಮ್ರದ ಲೋಟ ಮತ್ತು ಜಗ್ಗ್ ಎಲ್ಲರ ಗಮನ ಸೆಳೆದಿದೆ.
ಹಲವು ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಾವು ಯತೇಚ್ಛವಾಗಿ ಕಾಣುತ್ತೇವೆ. ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಗಣ್ಯರಿಗೆ ಕುಡಿಯಲು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಇಟ್ಟಿರುವುದನ್ನು ನೋಡಿದ್ದೇವೆ. ಆದರೆ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ನೀರು ಕುಡಿಯಲು ತಾಮ್ರದ ಲೋಟವನ್ನು ಬಳಸಲಾಗಿದೆ.
ಇನ್ನು ಈ ಕೊರೊನಾ ಸಾಂಕ್ರಾಮಿಕದ ಸಂದರ್ಭದ ಹಿನ್ನೆಲೆಯಲ್ಲಿ ಎಲ್ಲರಿಗೂ ಬಿಸಿ ನೀರನ್ನು ಒದಗಿಸುವ ಉದ್ದೇಶದಿಂದಾಗಿ ಈ ತಾಮ್ರದ ಲೋಟ ಮತ್ತು ಜಗ್ಗ್ ಬಳಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ''ಪ್ಲಾಸ್ಟಿಕ್ ಬಾಟಲಿಗಳ ಬಳಕೆಗೆ ಸಂಪೂರ್ಣವಾಗಿ ಅಂತ್ಯ ಹಾಡುವ ಸಲುವಾಗಿ ಹಾಗೂ ಬಿಸಿ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸಭೆಯಲ್ಲಿ ತಾಮ್ರದ ಲೋಟ ಮತ್ತು ಜಗ್ಗ್ ಇರಿಸಲಾಗಿದೆ'' ಎಂದು ತಿಳಿಸಿದ್ದಾರೆ.