ಮಂಗಳೂರು, ನ.05 (DaijiworldNews/PY): "ಲವ್ ಜಿಹಾದ್ ವಿರುದ್ದ ಕಠಿಣ ಕಾನೂನು ತರಲು ಕೋರ್ ಕಮಿಟಿಯಲ್ಲಿ ಚರ್ಚಿಸಲಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಒಕ್ಕೊರಲ ತೀರ್ಮಾನವಾಗಿದೆ" ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿದರು.
ಮಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಎರಡು ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ವಿಶ್ವಾಸದ ಬಗ್ಗೆ ವಿಶ್ಲೇಷಣೆ ನಡೆದಿದೆ. ಸಮಿತಿಯ ಸಭೆಯಲ್ಲಿ ರಾಜ್ಯಸಭೆ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆಯಾಗಿದೆ. ಶಾರ್ಟ್ ಲಿಸ್ಟ್ ಮಾಡಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗುತ್ತದೆ. ಈಗಾಗಲೇ 10-12 ಹೆಸರು ಬಂದಿದ್ದು, ಅದರಲ್ಲಿ ಆಯ್ದು ಕಳುಹಿಸಲಾಗುತ್ತದೆ. ಅಲ್ಲಿ ಕೇಂದ್ರ ಚುನಾವಣಾ ಸಮಿತಿ ಅಂತಿಮ ನಿರ್ಧಾರ ಮಾಡುತ್ತದೆ" ಎಂದರು.
"ನ.25ರಿಂದ ಡಿ.5ರವೆರೆಗೆ ಮಹಾಶಕ್ತಿ ಕೇಂದ್ರದ ಮಟ್ಟದಲ್ಲಿ ಪ್ರಶಿಕ್ಷಣ ವರ್ಗ ನಡೆಸಲು ನಿರ್ಧರಿಸಲಾಗಿದೆ. ಇದರಲ್ಲಿ ಮಹಾಶಕ್ತಿಕೇಂದ್ರದ ಪಂಚ ರತ್ನ ಪ್ರತಿನಿಧಿಗಳು ಭಾಗವಹಿಸುತ್ತಾರೆ" ಎಂದು ತಿಳಿಸಿದರು.
"ಮುಂದಿನ ಗ್ರಾ.ಪಂ ಚುನಾವಣೆ ಬಗ್ಗೆ ಪಕ್ಷ ಸನ್ನದ್ಧವಾಗಿದೆ. ಮಂಡಲಗಳಲ್ಲಿ ವಾರ್ ರೂಂ, ಕಾಲ್ ಸೆಂಟರ್ಗಳು ಆರಂಭವಾಗುತ್ತದೆ" ಎಂದರು.
ಲವ್ ಜಿಹಾದ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಲವ್ ಜಿಹಾದ್ ಬಗ್ಗೆ ಕಠಿಣ ಕಾನೂನು ತರಲು ಕೋರ್ ಕಮಿಟಿಯಲ್ಲಿ ಚರ್ಚಿಸಲಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಒಕ್ಕೊರಲ ತೀರ್ಮಾನವಾಗಿದೆ. ಸರ್ಕಾರದ ಮಟ್ಟದಲ್ಲಿ, ಅಧಿಕಾರಿಗಳು, ಮುಖಂಡರು ಚರ್ಚೆ ನಡೆಸಿ ಕಾನೂನು ತರಲು ಕೋರ್ ಕಮಿಟಿ ಸಲಹೆ ನೀಡಿದೆ" ಎಂದು ಹೇಳಿದರು.
ಗೋ ಹತ್ಯೆ ನಿಷೇಧದ ಬಗ್ಗೆ ಮಾತನಾಡಿದ ಅವರು, "ಗೋ ಹತ್ಯೆ ನಿಷೇಧ ಕಾನೂನು ಜಾರಿ ಬಗ್ಗೆ ಚರ್ಚೆ ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಕಾಯ್ದೆಗೆ ಒಂದಷ್ಟನ್ನು ಸೇರಿಸಿ ಜಾರಿ ಮಾಡುವ ಬಗ್ಗೆ ಕಮಿಟಿ ಸಲಹೆ ನೀಡಿದೆ" ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಮುಖ್ಯಮಂತ್ರಿ ಬದಲಾವಣೆ ಬಿಜೆಪಿಯ ಚರ್ಚೆಯ ವಿಷಯವಲ್ಲ. ಅದು ಕೇವಲ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಚರ್ಚೆಯಷ್ಟೇ. ನಮಗೆ ಯಡಿಯೂರಪ್ಪನವರೇ ನಾಯಕರಾಗಿರುತ್ತಾರೆ" ಎಂದು ತಿಳಿಸಿದರು.