ಮಂಗಳೂರು, ನ. 05 (DaijiworldNews/MB) : ''ಕಾಂಗ್ರೆಸ್ ಈಗ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂಬಂತಾಗಿದೆ'' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ಲೇವಡಿ ಮಾಡಿದರು.
File Photo
ನಗರದಲ್ಲಿ ಗುರುವಾರ ನಡೆಯುತ್ತಿರುವ ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಭಾಷಣ ಮಾಡಿದ ಅವರು, ''ಸಹವಾಸ ದೋಷದಿಂದಾಗಿ ಸನ್ಯಾಸಿಯೂ ಕೂಡಾ ಕೆಟ್ಟವನಾಗುತ್ತಾನೆ ಎಂಬಂತೆ ಕಾಂಗ್ರೆಸ್ ಜೊತೆ ಸೇರಿ ಶಿವಸೇನೆಯೂ ಕೂಡಾ ಅದೇ ರೀತಿ ಆಗಿದೆ'' ಎಂದು ಹೇಳಿದರು.
''ಸ್ವಾತಂತ್ರ್ಯ ದೊರೆತ ಬಳಿಕ ಕಾಂಗ್ರೆಸ್ ಬದಲಾಗಿದೆ. ಈಗ ಕಾಂಗ್ರೆಸ್ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂಬಂತೆ ಆಗಿದೆ. ಅವರದ್ದು ಈಗ ಎಲ್ಲಾ ವಿಚಾರದಲ್ಲೂ ಅನುಮಾನ ಮತ್ತು ಅಪಪ್ರಚಾರ'' ಎಂದು ದೂರಿದ ಅವರು, ''ತುರ್ತು ಪರಿಸ್ಥಿತಿ ಬಳಿಕವೂ ಕಾಂಗ್ರೆಸ್ ಯಾವುದೇ ಪಾಠ ಕಲಿತಿಲ್ಲ'' ಎಂದರು.
''ಕಾಂಗ್ರೆಸ್ಗೆ ಇವಿಎಂ ಯಂತ್ರ, ಸಿಎಎ ಕಾಯ್ದೆ, 370 ವಿಧಿ ರದ್ದತಿ ಬಗ್ಗೆ ಅನುಮಾನ ಮೂಡಿದೆ. ದೇಶದಲ್ಲಿ ಎಲ್ಲರೂ ಹೆಮ್ಮೆ ಪಡುವ ವಿಚಾರ ಸರ್ಜಿಕಲ್ ಸ್ಟ್ರೈಕ್. ಆದರೆ ಕಾಂಗ್ರೆಸ್ ಅದಕ್ಕೂ ಅನುಮಾನ ವ್ಯಕ್ತಪಡಿಸಿದೆ. ಸೈನಿಕರ ಮೇಲೆಯೇ ಅನುಮಾನ ಪಡುವವರು ತನ್ನ ತಾಯಿಯನ್ನು ನಂಬುತ್ತಾರಾ?'' ಎಂದು ಪ್ರಶ್ನಿಸಿದ್ದಾರೆ.
''ಸಿಎಎ ವಿರುದ್ಧ ನಿಜವಾಗಿ ಪಾಕಿಸ್ತಾನದಲ್ಲಿ ಪ್ರತಿಭಟನೆ ನಡೆಯಬೇಕಾಗಿತ್ತು. ಆದರೆ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದಿದೆ'' ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.