ಮಂಗಳೂರು, ನ. 05 (DaijiworldNews/MB) : ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನವೆಂಬರ್ 5 ರ ಗುರುವಾರ ಕುತ್ತಾರ್ನಲ್ಲಿರುವ ಬಾಲ ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿದರು. ಅವರು ಕೇಂದ್ರದಲ್ಲಿ ಗೋ ಪೂಜೆ ನಡೆಸಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ವಿಜಯೇಂದ್ರ ಅವರು ಆಶ್ರಮದಲ್ಲಿ ಮಕ್ಕಳೊಂದಿಗೆ ತಮ್ಮ ಜನ್ಮದಿನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ''ಇತ್ತೀಚೆಗೆ ಶಿರಾದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯು 25 ಸಾವಿರ ಮತಗಳ ಅಂತರದಿಂದ ಜಯಶಾಲಿಯಾಗಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಅಪೇಕ್ಷೆಯಂತೆ ಮೈಸೂರಿನಲ್ಲಿ ಸಂಘಟನೆ ಬಲಪಡಿಸಲು ಪಕ್ಷ ಒತ್ತು ನೀಡುತ್ತಿದೆ'' ಎಂದು ತಿಳಿಸಿದರು.
ಯಾವುದೇ ಪ್ರತಿಫಲ ನಿರೀಕ್ಷಿಸದೆ ಸೇವಾ ಕಾರ್ಯ ನಿರ್ವಹಿಸುತ್ತಿರುವ ಕುತ್ತಾರ್ ಆಶ್ರಮದ ಸಂಘಟಕರನ್ನು ಅವರು ಶ್ಲಾಘಿಸಿದರು.
''ಯಡಿಯೂರಪ್ಪನವರ ಮಗನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ'' ಎಂದು ಹೇಳಿದ ಅವರು, ''ನಾವು ಬೆಳೆಯುತ್ತಿದ್ದೇವೆ ಹಾಗೂ ಪಕ್ಷದ ಅಭಿವೃದ್ದಿಗಾಗಿ ಕಾರ್ಯನಿರ್ವಹಿಸುತ್ತಿರುವ ಪಕ್ಷದ ಕಾರ್ಯಕರ್ತರ ಪ್ರೀತಿ ಮತ್ತು ವಿಶ್ವಾಸವನ್ನು ಬೆಳೆಸುತ್ತಿದ್ದೇವೆ. ಈ ಆಶ್ರಮಕ್ಕೆ ನಾವು ಎಲ್ಲ ರೀತಿಯ ಬೆಂಬಲ ಮತ್ತು ಸಹಾಯವನ್ನು ನೀಡುತ್ತೇವೆ" ಎಂದು ಭರವಸೆ ನೀಡಿದರು.
ತಮ್ಮ ಜನ್ಮದಿನದ ಆಚರಣೆಗೆ ಯಾವುದೇ ಯೋಜನೆಯನ್ನು ಮಾಡಿಲ್ಲದ ಅವರು ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಆಶ್ರಮದ ಮಕ್ಕಳೊಂದಿಗೆ ಸರಳವಾಗಿ ಆಚರಿಸಿದರು.
ಆಶ್ರಮದ ನಿರ್ವಾಹಕರಾದ ಅನಂತಕೃಷ್ಣ ಭಟ್, ಬಿಜೆಪಿ ಮುಖಂಡರುಗಳಾದ ಕಿಶೋರ್ ಕುಮಾರ್ ಪುತ್ತೂರು, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಪಂಡಿತ್ ಹೌಸ್, ಗೋಪಾಲ್ ಕುತ್ತಾರ್, ರಾಜೀವ್ ಮೈಸೂರು ಉಪಸ್ಥಿತರಿದ್ದರು.