ಮಂಗಳೂರು, ನ.05 (DaijiworldNews/PY): ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸಿಬಿಐ ವಶ ಹಿನ್ನೆಲೆ ಮಂಗಳೂರಿನಲ್ಲಿ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸಿಬಿಐ ವಶ ಹಿನ್ನೆಲೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, "ಒಂದು ಕಾಲದಲ್ಲಿ ಅಧಿಕಾರ ಹಣ ಉಪಯೋಗಿಸಿ ಕೊಲೆ, ಸುಲಿಗೆಯಾಗುತ್ತಿತ್ತು. ಅದೇ ಸರ್ಕಾರ ಯಾವಾಗಲೂ ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ" ಎಂದರು.
"ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದಿದೆ. ಸಿಬಿಐ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಸಿಬಿಐ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಲಿದೆ. ತನಿಖೆಯಲ್ಲಿ ವಿನಯ್ ಕುಲಕರ್ಣಿ ನಿರಪರಾಧಿಯಾಗಿ ಹೊರಬಂದರೆ ತುಂಬಾ ಖುಷಿಯಾಗುತ್ತದೆ. ಆದರೆ, ಯಾವುದೇ ಕಾರಣಕ್ಕೂ ವಿನಯ್ ಕುಲಕರ್ಣಿಯನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ" ಎಂದು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, "ಜಿ.ಪಂ ಸದಸ್ಯನ ಕೊಲೆ ಕೇಸ್ನಲ್ಲಿ ಸಿಬಿಐ ಕಾನೂನು ಪ್ರಕಾರ ತನಿಖೆ ಮಾಡುತ್ತಿತ್ತು. ಇವತ್ತು ವಿನಯ್ ಕುಲಕರ್ಣಿ ಬಂಧನ ಸಿಬಿಐನ ಕಾನೂನಾತ್ಮತ ನಿರ್ಧಾರವಾಗಿದೆ. ಯೋಗೆಶ್ ಗೌಡ ಹತ್ಯೆಯಾಗಿದ್ದ ಸಂದರ್ಭ ತನಿಖೆ ಮಾಡಿ ಎಂದು ಬಿಜೆಪಿ ಆಗ್ರಹಿಸಿದ್ದು, ಅವರ ಮನೆಗೆ, ಕುಟುಂಬಕ್ಕೆ ನ್ಯಾಯ ಸಿಗಬೇಕು ಎನ್ನುವ ಆಗ್ರಹ ಮಾಡಿತ್ತು. ಎಲ್ಲಾ ತನಿಖೆ ಮಾಡಿದ ನಂತರ ಸಿಬಿಐ ಕಾನೂನು ಕ್ರಮ ಕೈಗೊಂಡಿದೆ" ಎಂದರು.
"ಕಾಂಗ್ರೆಸ್ಗೆ ಎಲ್ಲದರಲ್ಲೂ ರಾಜಕೀಯ ಹುಡುಕುವ ಹುಚ್ಚಿದೆ. ಕಾಂಗ್ರೆಸ್ ಆಡಳಿತದಲ್ಲಿರುವ ವೇಳೆಯೂ ಸಿಬಿಐ ದಾಳಿ, ಬಂಧನವಾಗುತ್ತಿತ್ತು. ಆಗೆಲ್ಲಾ ಇದು ಇವರ ಪ್ರೇರಣೆಯಲ್ಲಿ ಆಗುತ್ತಿತ್ತಾ? ಸಿಬಿಐ ಸ್ವತಂತ್ರ ಸಂಸ್ಥೆ ಕಾನೂನು ಪ್ರಕಾರ ಕುಲಕರ್ಣಿಯನ್ನು ಬಂಧಿಸಿದೆ" ಎಂದು ಹೇಳಿದರು.
ಇನ್ನು ಈಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿದ್ದು, "ವಿನಯ್ ಕುಲಕರ್ಣಿ ಅಪರಾಧಿ ಸ್ಥಾನದಲ್ಲಿದ್ದಾರೆ. ಈ ಕಾರಣದಿಂದ ಸಿಬಿಐ ಅವರನ್ನು ವಶಕ್ಕೆ ಪಡೆದಿದೆ. ಈ ಬಗ್ಗೆ ಸಿಬಿಐ ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆ ವಶಕ್ಕೆ ಪಡೆದಿದ್ದಾರೆ" ಎಂದರು.
"ಯೋಗೆಶ್ ಗೌಡ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ಎಲ್ಲರ ಆಪೇಕ್ಷೆ. ಈಗಲಾದರೂ ನ್ಯಾಯ ಸಿಗಲಿ ಎಂಬುದೇ ನಮ್ಮ ಅಭಿಪ್ರಾಯ. ಆದರೆ, ವಿನಯ್ ಕುಲಕರ್ಣಿ ಅವರು ಬಿಜೆಪಿಗೆ ಸೇರುತ್ತಾರೆ ಎನ್ನುವುದು ಶುದ್ದ ಸುಳ್ಳು" ಎಂದು ಹೇಳಿದರು.
2016ರಲ್ಲಿ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ.