ಉಡುಪಿ, ನ. 05 (DaijiworldNews/MB) : "ಡಾ ಬಿ ಆರ್ ಅಂಬೇಡ್ಕರ್ ಅವರು ಮೇಲ್ಜಾತಿಯಲ್ಲಿ ಜನಿಸಿದ್ದರೆ, ಜನರು ಅವನನ್ನು ದೇವರಂತೆ ನೋಡುತ್ತಿದ್ದರು. ನಮ್ಮ ಸಮಾಜದಲ್ಲಿ ಜಾತಿ ಪದ್ಧತಿ ಎಂದಿಗೂ ಅದು ಮೊದಲಿನಂತೆಯೇ ಇರುತ್ತದೆ" ಎಂದು ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನವೆಂಬರ್ 4 ರ ಬುಧವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎಸ್ಸಿ ಮೋರ್ಚಾ ನಾಯಕರ ಸಭೆಯಲ್ಲಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.
"ಎಸ್ಸಿ ಮೋರ್ಚಾದಲ್ಲಿ ಪ್ರಯತ್ನ ಅತ್ಯಗತ್ಯ. ತನ್ನ ಪ್ರಯತ್ನಗಳ ಮೂಲಕವೇ ಓರ್ವ ತನ್ನನ್ನು ತಾನು ಗುರುತಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಹೆಚ್ಚಾಗಿದೆ. ಈ ಸತ್ಯವನ್ನು ಯಾರೂ ಅಲ್ಲಗಳೆಯುವಂತಿಲ್ಲ" ಎಂದು ಅವರು ಹೇಳಿದರು.
"ಈ ಕಾಲದಲ್ಲಿ ರಾಜಕೀಯವು ಮುಖ್ಯವಾದದ್ದು. ಏಕೆಂದರೆ ಕೆಲವೊಮ್ಮೆ ನಾಯಕತ್ವದ ಗುಣಗಳನ್ನು ಹೊಂದಿರುವ ಜನರು ಕೂಡಾ ಮೂಲೆಗುಂಪಾಗುತ್ತಾರೆ. ನಾವು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ನಾವು ಗುರುತಿಸಿಕೊಳ್ಳಲು ಸಾಧ್ಯ. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು" ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, "ಪಕ್ಷದ ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದಾಗ ಮಾತ್ರ ಉನ್ನತ ಹುದ್ದೆಗಳಲ್ಲಿರುವ ನಾಯಕರು ಅವರ ಮೇಲೆ ವಿಶ್ವಾಸ ಹೊಂದುತ್ತಾರೆ. ಎಸ್ಸಿ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಈ ಸಭೆಯನ್ನು ಆಯೋಜಿಸಲಾಗಿದೆ. ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ತಲುಪುತ್ತದೆಯೇ ಎಂದು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಬೇಕಾಗಿದೆ" ಎಂದು ಹೇಳಿದರು.
"ಭಾರತದ ಸಂವಿಧಾನದ ಮುಖ್ಯ ವಿಷಯವೆಂದರೆ ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು" ಎಂದು ಕೂಡಾ ಈ ಸಂದರ್ಭದಲ್ಲೇ ಹೇಳಿದರು.
"ಒಬ್ಬ ವ್ಯಕ್ತಿಯು ಸಾಧನೆ ಮಾಡಬೇಕಾದರೆ ಸ್ಪಷ್ಟವಾದ ಗುರಿ ಮುಖ್ಯವಾಗಿದೆ. ರಾಜಕೀಯವು ಗುಲಾಬಿಗಳ ಹಾಸಿಗೆಯಲ್ಲ. ಏನನ್ನಾದರೂ ಸಾಧಿಸಲು ನಾವು ಹೋರಾಡಬೇಕಾಗಿದೆ. ಇಂದು ಜನರು ಡಾ.ಬಿ.ಆರ್.ಅಂಬೇಡ್ಕರ್ ಅವರ ನಿರ್ದೇಶನವನ್ನು ಅನುಸರಿಸಬೇಕಾಗಿದೆ. ಅವರ ತತ್ವಗಳ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದರು.
ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಜಗದೀಶ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ್ ಖಾರ್ವಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.