ಕಾರ್ಕಳ, ನ. 04 (DaijiworldNews/HR): ರಸಗೊಬ್ಬರವನ್ನು ಗೋದಾಮಿಗೆ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿರ್ಲಕ್ಷ್ಯದಿಂದ ಹಿಮ್ಮುಖವಾಗಿ ಚಲಿಸಿದ ಪರಿಣಾಮವಾಗಿ ಬಾವಿಯೊಳಗಿಳಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಮಂಗಳೂರಿನಿಂದ ಕಾರ್ಕಳದ ಮೂರುಮಾರ್ಗದ ಮಂಗಳೂರು ರಸ್ತೆಯಲ್ಲಿರುವ ಗೋದಾಮಿಗೆ ರಸಗೊಬ್ಬರ ಭಾರೀ ಗಾತ್ರದ ಲಾರಿಯೊಂದರಲ್ಲಿ ತುಂಬಿಸಿ ತರಲಾಗಿತ್ತು. ರಸಗೊಬ್ಬರವನ್ನು ಇಳಿಸುವ ಭರದಲ್ಲಿ ಚಾಲಕ ಲಾರಿಯನ್ನು ಏಕಾಏಕಿಯಾಗಿ ಅತೀವೇಗದಿಂದ ಹಿಮ್ಮಖ ಚಲಾಯಿಸಿಸಿರುವುದು ಘಟನೆಗೆ ಕಾರಣವೆನ್ನಲಾಗಿದೆ.
ನಿಯಂತ್ರಣ ತಪ್ಪಿದ ಲಾರಿ ಕಟ್ಟೆ ಮುರಿದು ಹಾಕಿ ಬಾವಿಯೊಳಗೆ ಸಿಲುಕಿತು. 30 ಅಡಿ ಆಳದ ಬಾವಿ ಅದಾಗಿದ್ದು, 20 ಟನ್ ರಸಗೊಬ್ಬರ ಬಾವಿಯ ನೀರಿನೊಳಗೆ ಲೀನವಾಗಿಗಿರುವುದರಿಂದ ಪರಿಸರದ ಬಾವಿ ನೀರಿನಲ್ಲಿಯೂ ರಸಗೊಬ್ಬರದ ಸಾರ ಮಿಶ್ರಣವಾಗುವ ಭೀತಿಯಲ್ಲಿ ನಾಗರಿಕರಿದ್ದಾರೆ. ರಸಗೊಬ್ಬರದ ಮೌಲ್ಯ ರೂ.1.36 ಇತ್ತೆಂದು ತಿಳಿದುಬಂದಿದೆ.