Karavali
ಮಂಗಳೂರು: 'ನಾನು ನಳಿನ್ ಕೈಗೊಂಬೆಯಲ್ಲ, ಆದರೆ ಮಾರ್ಗದರ್ಶನ ಪಡೆಯುತ್ತೇವೆ' - ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್
- Tue, Nov 03 2020 01:21:09 PM
-
ಮಂಗಳೂರು, ನ. 03 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯು ಬಿಜೆಪಿಯ ಭದ್ರಕೋಟೆಯೆಂದೇ ಪ್ರಸಿದ್ಧವಾಗಿದೆ. 2013 ರ ಚುನಾವಣೆಯಲ್ಲಿ ಸುಳ್ಯ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಜನರು ಮತಚಲಾಯಿಸುವ ಮೂಲಕ ಅಚ್ಚರಿಯ ಫಲಿತಾಂಶ ಹೊರಬಂದಿತ್ತು. ಆದರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಉಳ್ಳಾಲ ಹೊರತುಪಡಿಸಿ ಉಳಿದೆಲ್ಲಾ ಕಡೆಗಳಲ್ಲಿ ಬಿಜೆಪಿ ಗೆಲುವು ತನ್ನದಾಗಿಸಿಕೊಂಡಿದೆ. ದಕ್ಷಿಣ ಕನ್ನಡದಲ್ಲಿ ಪ್ರಸ್ತುತ ಏಳು ಶಾಸಕರು ಮತ್ತು ಸಂಸದರು ಬಿಜೆಪಿಯವರಾಗಿದ್ದು ಜಿಲ್ಲೆಯಲ್ಲಿ ಬಲವಾದ ಮೋದಿ ಅಲೆಯಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಜಿಲ್ಲೆಯವರಾಗಿದ್ದು, ಸಂಸದರೂ ಆಗಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸಂಪುಟದಲ್ಲಿ ಸ್ಥಾನ ನಿರಾಕರಿಸಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ದಾಯ್ಜಿವಲ್ಡ್ 24x7 ಚಾನೆಲ್ನಲ್ಲಿ ಪ್ರಸಾರವಾಗುವ ವಾಹಿನಿಯ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ ಅವರೊಂದಿಗೆ ನಡೆದ 'ರಫ್ ಎನ್ ರೈಟ್' ವಿಶೇಷ ಸಂದರ್ಶನದಲ್ಲಿ ದಕ್ಷಿಣ ಕನ್ನಡದ ಶಾಸಕರಿಗೆ ಸಚಿವ ಸ್ಥಾನ ನಿರಾಕರಣೆ ಹಾಗೂ ನಳಿನ್ ಅವರ ಕೈಗೊಂಬೆ ಸುದರ್ಶನ್ ಮೂಡುಬಿದಿರೆ ಎಂಬ ಆರೋಪ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.ಈ ಸಂದರ್ಶನದ ಆಯ್ದ ಭಾಗಗಳು
ಪ್ರಶ್ನೆ: ದಕ್ಷಿಣ ಕನ್ನಡದಲ್ಲಿ ಈಗಾಗಲೇ ಬಲವಾದ ಬಿಜೆಪಿ ಅಲೆ ಇದೆ. ಜಿಲ್ಲೆಯಲ್ಲಿ ಈಗಾಗಲೇ 7 ಶಾಸಕರು ಮತ್ತು ಸಂಸದರು ಇರುವುದರಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನಿಮಗೆ ಎದುರಿಸಲು ಯಾವುದೇ ಸವಾಲುಗಳಿಲ್ಲ ಎಂದು ಜನರು ಹೇಳುತ್ತಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಉತ್ತರ: ಜಿಲ್ಲೆಯಲ್ಲಿ ಬಿಜೆಪಿಗೆ ಸವಾಲುಗಳಿವೆ. ರಾಜ್ಯ, ಕೇಂದ್ರ ಮತ್ತು ಸ್ಥಳೀಯ ಆಡಳಿತದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಇದೇ ನಮಗೆ ದೊಡ್ಡ ಸವಾಲಾಗಿದೆ.
ಪ್ರ: ನೀವು ಮೂಡುಬಿದಿರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೀರಿ. ನಿಮ್ಮನ್ನು ತೃಪ್ತಿಪಡಿಸಲೆಂದು ಮಾತ್ರ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಕುರಿತು ನೀವು ಏನು ಹೇಳುತ್ತೀರಿ?
ಉ: ನಾನು ಅದನ್ನು ನಿರಾಕರಿಸುತ್ತೇನೆ. ಎಲ್ಲೆಡೆ ಆಕಾಂಕ್ಷಿಗಳಿದ್ದಾರೆ. ಆದರೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಬಳಿಕ ನಾವು ವ್ಯಕ್ತಿಯನ್ನು ನೋಡುವುದಿಲ್ಲ, ಪಕ್ಷವನ್ನು ನೋಡುತ್ತೇವೆ. ಪಕ್ಷದ ಗೆಲುವಿಗಾಗಿ ಕೆಲಸ ಮಾಡುತ್ತೇವೆ.ಪ್ರ: ಚುನಾವಣೆಯಲ್ಲಿ ಬಿಜೆಪಿಗೆ ಜಿಲ್ಲೆಗೆ ಜನರಿಂದ ಉತ್ತಮ ಬೆಂಬಲ ದೊರೆತಿದೆ. ಆದರೆ 7 ಶಾಸಕರನ್ನು ಹೊಂದಿದ್ದರೂ ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಯ ಯಾವುದೇ ಸಚಿವರು ಇಲ್ಲ. ಜಿಲ್ಲೆಯ ಶಾಸಕರು ಮಂತ್ರಿ ಸ್ಥಾನಗಳಿಗೆ ಅರ್ಹರಲ್ಲ ಎಂದು ನೀವು ಭಾವಿಸುತ್ತೀರಾ?
ಉ: ಖಂಡಿತವಾಗಿ, 7 ಶಾಸಕರು ಮಂತ್ರಿ ಹುದ್ದೆಗೆ ಅರ್ಹರು. ಸಂಪುಟ ವಿಸ್ತರಣೆಯ ಸಂದರ್ಭ ಕೆಲವು ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಪಕ್ಷದ ರಾಜ್ಯ ಅಧ್ಯಕ್ಷರ ಹುದ್ದೆಯನ್ನು ನಮ್ಮ ಜಿಲ್ಲೆಯ ನಳಿನ್ ಕುಮಾರ್ ಕಟೀಲ್ ಅವರಿಗೆ ಪಕ್ಷ ನೀಡಿದೆ. ನಮಗೆ ಮುಂದಿನ ದಿನಗಳಲ್ಲಿ ಅವಕಾಶಗಳಿವೆ.
ಪ್ರ: ನೀವು ನಳಿನ್ ಕುಮಾರ್ ಕಟೀಲ್ ಅವರಿಗೆ ಆತ್ಮೀಯರು. ನೀವು ನಳಿನ್ ಅವರ ಕೈಗೊಂಬೆಯಾಗಿದ್ದೀರಿ ಎಂಬ ಆರೋಪವಿದೆ, ಇದು ನಿಜಾನಾ?
ಉ: ಇದು ಶುದ್ದ ಸುಳ್ಳು, ಅಂತಹ ಆರೋಪಗಳನ್ನು ನಾನು ನಿರಾಕರಿಸುತ್ತೇನೆ. ಇಂದಿನವರೆಗೂ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲಾ ಚಟುವಟಿಕೆಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಆದರೆ ಸಮಸ್ಯೆ ಬಂದ ಸಂದರ್ಭದಲ್ಲಿ ನಾವು ಅವರ ಮಾರ್ಗದರ್ಶನ ಪಡೆಯುತ್ತೇವೆ. ಅವರಿಗೆ ಇರುವ ಅನುಭವದಿಂದಾಗಿ ಅವರ ಬಳಿ ಮಾರ್ಗದರ್ಶನ ಪಡೆಯುತ್ತೇವೆ.
ಪ್ರ: ಇತ್ತೀಚೆಗೆ ಮರಳು ಮಾಫಿಯಾದ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿದೆ. ಸಂಸದರಾದ ನಳಿನ್ ಕಟೀಲ್ ಅವರು 2,000 ರೂ.ಗೆ ಮರಳು ನೀಡುವ ಭರವಸೆ ನೀಡಿದ್ದಾರೆ. ಮರಳಿನ ಅಕ್ರಮಗಳಲ್ಲಿ ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ.
ಉ: ಕೆಲವು ರಾಜಕೀಯ ನಾಯಕರು ಮರಳು ಮಾಫಿಯಾವನ್ನು ನಡೆಸುತ್ತಿದ್ದಾರೆ. ದಿವಂಗತ ಡಾ ವಿ ಎಸ್ ಆಚಾರ್ಯ ಅವರು ಮರಳು ನೀತಿಯನ್ನು ಪರಿಚಯಿಸಿದ್ದರು. ಅದನ್ನು ನಾವು ಕರಾವಳಿ ತೀರದಲ್ಲಿ ಜಾರಿಗೆ ತರಲು ಪ್ರಯತ್ನಿಸಿದ್ದೆವು. ಆದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಮರಳು ಮಾಫಿಯಾ ತೀವ್ರ ಮಟ್ಟಕ್ಕೆ ಏರಿತು. ಯಾವುದೇ ಬಿಜೆಪಿ ನಾಯಕರು ಯಾವುದೇ ಅಕ್ರಮಗಳಲ್ಲಿ ಭಾಗಿಯಾಗಿಲ್ಲ. ಈ ಬಗ್ಗೆ ಜನರಿಗೆ ತಿಳಿದಿದೆ.
ಪ್ರ: ಮಿಥುನ್ ರೈ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೆಳೆಯುವ ಯುವ ನಾಯಕ. ಬಿಜೆಪಿ ಅವರನ್ನು ಗುರಿಯಾಗಿಸುತ್ತಿದೆಯೇ? ಅವರನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿಲ್ಲವೇ?
ಉ: ಮಿಥುನ್ ರೈ ಮಾತ್ರವಲ್ಲ, ಮೋದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ. ನಾವು ಮಿಥುನ್ ರೈ ಅವರನ್ನು ಗುರಿಯಾಗಿಸಬೇಕಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಳುಗುವ ದೋಣಿ, ಅದು ಮತ್ತೆ ಎಂದಿಗೂ ಮೇಲಕ್ಕೆ ಬರಲ್ಲ.
ಪ್ರ: ಇತ್ತೀಚೆಗೆ ಬಿಜೆಪಿ ಪ್ರತಿನಿಧಿ ದಿನೇಶ್ ಅವರ ಸ್ಟುಡಿಯೋದಲ್ಲಿ ದಾಳಿ ನಡೆದಿತ್ತು. ಎರಡು ವರ್ಷಗಳ ಹಿಂದೆ ಶರತ್ ಮಡಿವಾಳ ಅವರ ಹತ್ಯೆಯಾದಾಗ ಅಂದಿನ ಆಡಳಿತಾರೂಡ ಪಕ್ಷ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟಿಸಿದರು. ಪ್ರತಿಪಕ್ಷವಾಗಿ ಬಿಜೆಪಿ ಎಲ್ಲವನ್ನು ಮಾಡಿದ್ದರು. ಈಗ ಬಿಜೆಪಿ ಅಧಿಕಾರದಲ್ಲಿದೆ. ದಿನೇಶ್ ಹಲ್ಲೆ ವಿಚಾರದಲ್ಲಿ ಧ್ವನಿ ಎತ್ತಲು ಬಿಜೆಪಿ ನಾಯಕರು ಎಲ್ಲಿದ್ದಾರೆ?
ಉ: ಶರತ್ ಮಡಿವಾಳ ಸಾವಿನ ಸಮಯವನ್ನು ಕೂಡಾ ಮುಚ್ಚಿಡಲಾಗಿತ್ತು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದರು. ಆ ಕಾರಣದಿಂದಾಗಿ ನಾವು ಈ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದೆವು. ದಿನೇಶ್ ಮೇಲೆ ಹಲ್ಲೆ ನಡೆದಾಗ ನಾವು ಆಸ್ಪತ್ರೆಗೆ ತೆರಳಿದ್ದೇವೆ. ಶಾಸಕ ಡಾ.ಭರತ್ ಶೆಟ್ಟಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರ: ಮುಂಬರುವ ರಾಜ್ಯ ಕಾರ್ಯಕಾರಿ ಸಭೆಯ ಸಿದ್ಧತೆ ಹೇಗೆ ನಡೆಯುತ್ತಿದೆ?
ಉ: ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಆಶ್ರಯದಲ್ಲಿ ದಕ್ಷಿಣ ಕನ್ನಡದಲ್ಲಿ ವಿಶೇಷ ಕಾರ್ಯಕಾರಿ ಸಭೆ ನಡೆಸಲು ನಾವು ಅದೃಷ್ಟವಂತರು. ನಾವು 16 ಸಮಿತಿ ರಚಿಸಿದ್ದು ಪ್ರತಿ ಸಮಿತಿಗೂ ಜವಾಬ್ದಾರಿಗಳನ್ನು ನೀಡಲಾಗಿದೆ. ಈವರೆಗೆ ಒಟ್ಟು 158 ಪಕ್ಷದ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಖಾತರಿ ಪಡಿಸಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಸಿ ಟಿ ರವಿ ಮತ್ತು ಡಿ ವಿ ಸದಾನಂದ ಗೌಡ ಭಾಗವಹಿಸಲಿದ್ದಾರೆ.
ಪ್ರ: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನಿಮ್ಮ ಮುಂದಿನ ಗುರಿಯೇನು?
ಉ: ಗ್ರಾಮ ಪಂಚಾಯಿತಿ ಚುನಾವಣೆಗಳತ್ತ ಗಮನ ಹರಿಸಲಾಗುವುದು. ಗ್ರಾಮ ಪಂಚಾಯಿತಿ ಚುನಾವಣೆ ಒಂದು ಅಡಿಪಾಯ, ಬಿಜೆಪಿ ಅದರಿಂದಾಗಿ ಬೆಳೆಯಿತು. 225 ಗ್ರಾಮ ಪಂಚಾಯಿತಿಗಳಲ್ಲಿ 200 ಕ್ಕಿಂತ ಅಧಿಕ ಕಡೆ ಗೆಲುವು ಪಡೆಯುವುದು ನಮ್ಮ ಗುರಿ. ಸಿದ್ಧತೆಗಳ ಭಾಗವಾಗಿ, ನಾನು ಎಲ್ಲಾ ಕ್ಷೇತ್ರಗಳ ಪ್ರವಾಸಗಳನ್ನು ನಡೆಸಿದ್ದು ನಮಗೆ ಅನುಕೂಲಕರವಾದ ವಾತಾವರಣವಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ನಾವು ಮಂಗಳೂರಿನಲ್ಲಿ ಗೆಲ್ಲುತ್ತೇವೆ, ಎಂಟು ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ.