ಉಡುಪಿ, ನ.01 (DaijiworldNews/PY): "ಉಡುಪಿ ಜಿಲ್ಲೆಯನ್ನು ಪ್ರಾಚೀನ ಕಾಲದಿಂದಲೂ ಕನ್ನಡ ನಾಡಿನ ಒಂದು ಭಾಗವೆಂದು ಗುರುತಿಸಲಾಗುತ್ತಿದೆ. ತುಳು ಇಲ್ಲಿನ ಆಡು ಭಾಷೆ. ಆದರೆ, ಇಲ್ಲಿ ಕನ್ನಡವನ್ನು ಆಡಳಿತ ಮತ್ತು ಶಿಕ್ಷಣಕ್ಕಾಗಿ ಬಳಸಲಾಗುತ್ತದೆ. ತುಳು ಮತ್ತು ಕನ್ನಡ ಎರಡು ಕಣ್ಣುಗಳಿದ್ದಂತೆ ಎರಡನ್ನೂ ಒಟ್ಟಿಗೆ ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದ್ದು, ಇದೇ ರೀತಿ ಮುಂದುವರಿಯಬೇಕು" ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತದ ವತಿಯಿಂದ ನ.1ರ ಭಾನುವಾರದಂದು ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ನಡೆದ 65ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, "ಕನ್ನಡ ಸಾಹಿತ್ಯಕ್ಕೆ ಬರಹಗಾರರು, ವಿದ್ವಾಂಸರು ಕೊಡುಗೆ ನೀಡಿದ್ದಾರೆ. ಇಂದು ಕನ್ನಡ ಭಾಷಾ ಪ್ರಾಂತ್ಯವನ್ನು ಸ್ಥಾಪಿಸಲು ಹೋರಾಟ ಮಾಡಬೇಕೆಂದಿಲ್ಲ. ಆದರೆ ಕನ್ನಡವನ್ನು ಮುಂದಿನ ಪೀಳಿಗೆಗೆ ಅಭಿವೃದ್ಧಿಪಡಿಸುವುದು, ಬೆಳೆಸುವುದು ಮತ್ತು ಕೊಂಡೊಯ್ಯುವುದು ನಮ್ಮ ಎದುರು ಇರುವ ದೊಡ್ಡ ಸವಾಲಾಗಿದೆ. ಇಂದಿನ ಪೀಳಿಗೆಯು ಕಂಪ್ಯೂಟರ್ ಯುಗದಲ್ಲಿ ವಾಸಿಸುತ್ತಿದೆ ಮತ್ತು ಇತರ ಭಾಷೆಗಳಿಂದ ಮುಖ್ಯವಾಗಿ ಇಂಗ್ಲಿಷ್ನಿಂದ ಪ್ರಭಾವಿತವಾಗಿದೆ. ಕನ್ನಡ ಭಾಷೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ನಾವು ಪ್ರಾಮಾಣಿಕ ಪ್ರಯತ್ನವನ್ನು ಮಾಡೋಣ" ಎಂದರು.
"ಅಭಿವೃದ್ದಿಯ ದೃಷ್ಠಿಯಲ್ಲಿ ಬೈಂದೂರು, ಯಡ್ತರೆ ಹಾಗೂ ಪಡುವರಿ ಗ್ರಾಮಗಳನ್ನು ಒಳಗೊಂಡ ಗ್ರಾಮಪಂಚಾಯತ್ ಪ್ರದೇಶವನ್ನು ಪಟ್ಟಣ ಪಂಚಾಯತ್ಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಸರ್ಕಾರ ಉತ್ತಮ ಹೆಜ್ಜೆ ಇಟ್ಟಿದೆ. ಪಡುಬಿದ್ರಿ ಬೀಚ್ಗೆ ದೊರೆತ ಅಂತರಾಷ್ಟ್ರೀಯ ಮಾನ್ಯತೆಯು ಉಡುಪಿ ಕಿರೀಟಕ್ಕೆ ದೊರೆತ ಮತ್ತೊಂದು ಗರಿಯಾಗಿದೆ" ಎಂದು ತಿಳಿಸಿದರು.
"ಜಿಲ್ಲಾಸ್ಪತ್ರೆಯನ್ನು 250 ಬೆಡ್ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಅನುಮೋದನೆ ನೀಡಿದ್ದು, ಈ ಮೂಲಕ ಸರ್ಕಾರದಿಂದ 115 ಕೋಟಿ ರೂ.ಗಳ ವೆಚ್ಚದಲ್ಲಿ ಕಟ್ಟಡ ಹಾಗೂ 115 ಬೆಡ್ ಹಾಗೂ 115 ಸಿಬ್ಬಂದಿಗಳು ದೊರಕುವಂತಾಗಿದೆ. ಇದು ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಸಹಕಾರಿಯಾಗಿದೆ" ಎಂದು ಹೇಳಿದರು.
"ಇಂದು ನಾವೆಲ್ಲರೂ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ. ಕೊರೊನಾ ವಿರುದ್ಧ ಹೋರಾಡಲು ಪ್ರತಿಯೊಬ್ಬರ ಸಹಕಾರ ಮತ್ತು ಸಮನ್ವಯ ಮುಖ್ಯವಾಗಿದೆ. ಭುವನೇಶ್ವರಿ ದೇವಿಯು ಉತ್ತಮ ಆರೋಗ್ಯ ನೀಡಿ ಆಶೀರ್ವದಿಸಲಿ. ಎಲ್ಲಾ ಜನರಿಗೆ ಸರ್ಕಾರದ ಯೋಜನೆಗಳು ತಲುಪುವಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕು" ಎಂದರು.
ಈ ವೇಳೆ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 36 ಮಂದಿ ಸಾಧಕರಿಗೆ ಮತ್ತು 4 ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಗರಿಷ್ಠ ಅಂಕ ಪಡೆದ 9 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ.ಜಾತಿಯ ವಿದ್ಯಾರ್ಥಿನಿ ಕು.ಸ್ಪೂರ್ತಿ ಅಶೋಕ ರಾಥೋಡ ಮತ್ತು ಕೊಲ್ಲೂರಿನ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ಪ.ಪಂಗಡದ ವಿದ್ಯಾರ್ಥಿನಿ ಕು.ರಶ್ಮಿತಾ ಇವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ, ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಲ ಇವರ ಸ್ಮರಣಾರ್ಥ 1 ಲಕ್ಷ ರೂಪಾಯಿಗಳ ಬಹುಮಾನ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ರಘುಪತಿಭಟ್, ಕರಾವಳಿ ಅಭಿವೃದ್ದಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಾಬಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.
ಕೊರೊನಾ ಹಿನ್ನಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇರಪ್ರಸಾರವನ್ನು ಸಾರ್ವಜನಿಕರು ಮನೆಯಲ್ಲಿಯೇ ಕುಳಿತು, ವೆಬ್ಕಾಸ್ಟ್ ಮತ್ತು ಫೇಸ್ಬುಕ್ ಲೈವ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.