ಮಂಗಳೂರು, ಅ. 31 (DaijiworldNews/MB) : ಬಿಜೆಪಿಯ ಮೊದಲ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಗಾಗಿ ದಕ್ಷಿಣ ಕನ್ನಡ ಜಿಲ್ಲೆ ಸಜ್ಜಾಗುತ್ತಿದ್ದು, ''ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನವೆಂಬರ್ 5 ರಂದು ಮಂಗಳೂರಿನಲ್ಲಿ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಲಿದ್ದಾರೆ'' ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ತಿಳಿಸಿದ್ದಾರೆ.
"ಈ ಕಾರ್ಯಕಾರಿಣಿ ಸಭೆಯು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಡೆಯಲಿದೆ. ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಿದ ನಂತರ, ಅವರು ಪ್ರತಿ ಜಿಲ್ಲೆಯಲ್ಲಿ ಹಾಗೂ ತಮ್ಮ ತವರೂರಾದ ದಕ್ಷಿಣ ಕನ್ನಡದಲ್ಲಿ ಕಾರ್ಯಕಾರಿಣಿ ಸಭೆ ನಡೆಯಬೇಕೆಂದು ಬಯಸಿದ್ದರು. ಸಂಸದರ ತವರೂರಲ್ಲಿ ನವೆಂಬರ್ 5 ರಂದು ಕಾರ್ಯಕಾರಿ ಸಭೆ ನಡೆಸಲಿದ್ದಾರೆ" ಎಂದು ಸುದರ್ಶನ್ ಹೇಳಿದರು.
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಕಾರಿ ಸಭೆ ನಡೆಸಲು ನಾವು ಸಂತೋಷಪಡುತ್ತೇವೆ. ಇದರ ತಯಾರಿಗಾಗಿ ನಾವು 16 ಗುಂಪುಗಳನ್ನು ರಚಿಸಿದ್ದೇವೆ. ಪ್ರತಿ ಗುಂಪಿಗೆ ಕೆಲವು ಜವಾಬ್ದಾರಿಗಳನ್ನು ವಹಿಸಲಾಗಿದೆ. ಈವರೆಗೆ ಮೂರು ಸಭೆಗಳನ್ನು ನಡೆಸಲಾಗಿದೆ. ಪ್ರತಿಯೊಬ್ಬರೂ ಈ ಸಭೆಯ ಯಶಸ್ಸಿನತ್ತ ತಮ್ಮ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ" ಎಂದು ಅವರು ವಿವರಿಸಿದ್ದಾರೆ.
"ದಕ್ಷಿಣ ಕನ್ನಡದಿಂದ ಆರಂಭಿಸಿ ಬಳಿಕ ಪ್ರತಿ ಜಿಲ್ಲೆಯಲ್ಲೂ ಕಾರ್ಯಕಾರಿಣಿ ಸಭೆ ನಡೆಸುವ ಬಿಜೆಪಿ ರಾಜ್ಯಾಧ್ಯಕ್ಷರ ಯೋಚನೆಯು ಪಕ್ಷದ ಪ್ರತಿನಿಧಿಗಳನ್ನು ಉತ್ತೇಜಿಸುತ್ತದೆ. ಪಕ್ಷದ ಉನ್ನತಿಗಾಗಿ ಪಕ್ಷದಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಂಡ ನಾಯಕರಿಗೆ ಇದು ಒಂದು ಉತ್ತಮ ಅನುಭವವಾಗುತ್ತದೆ" ಎಂದು ಅವರು ತಿಳಿಸಿದರು.
"ಈವರೆಗೆ 158 ಬಿಜೆಪಿ ನಾಯಕರು ಸಭೆಗೆ ಹಾಜರಾಗುವುದನ್ನು ಖಚಿತಪಡಿಸಿದ್ದಾರೆ. ಕೇಂದ್ರ ನಾಯಕರುಗಳಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ರಾಜ್ಯ ನಾಯಕರಾದ ಸಿ.ಟಿ.ರವಿ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ ಈ ಸಭೆಯಲ್ಲಿ ವಿವಿಧ ಮೋರ್ಚಾಗಳ ನಾಯಕರು, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಸಂಚಾಲಕರು, ಸಹ-ಸಂಚಾಲಕರು, ವಿವಿಧ ಕೋಶಗಳ ಮುಖ್ಯಸ್ಥರು, ಕೋರ್ ಸಮಿತಿ ಸದಸ್ಯರು ಮತ್ತು ಪ್ರಾದೇಶಿಕ ಸಂಘಟನಾ ಕಾರ್ಯದರ್ಶಿಗಳು ಉಪಸ್ಥಿತರಿರುತ್ತಾರೆ" ಎಂದು ಸಭೆಯ ಕುರಿತಾಗಿ ಮಾಹಿತಿ ನೀಡಿದ್ದಾರೆ.
"ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳ ವಿಚಾರವಾಗಿ ಆದ್ಯತೆ ನೀಡಿ ಈ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ. ರಾಜ್ಯದಲ್ಲಿ ಪಕ್ಷದ ಮುಂದಿನ ಯೋಜನೆಗಳ ಜೊತೆಗೆ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಬಗ್ಗೆ ಚರ್ಚಿಸುತ್ತೇವೆ. ರಾಜ್ಯದಲ್ಲಿ ಪಕ್ಷವನ್ನು ಉತ್ತೇಜಿಸಲು ಬೂತ್ ಸಮಿತಿ ಸಕ್ರಿಯವಾಗಿದೆ. ನಾವು ಮುಂಬರುವ ಚುನಾವಣೆಗೆ ಬೂತ್ ಮಟ್ಟದಲ್ಲಿ ಪಕ್ಷದ ನಾಯಕರುಗಳನ್ನು ಕ್ರಿಯಾಶೀಲರನ್ನಾಗಿಸಲು ಕುಟುಂಬ ಮಿಲನ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ" ಎಂದು ಸುದರ್ಶನ್ ಅವರು ತಿಳಿಸಿದ್ದಾರೆ.