ಮಂಗಳೂರು, ಅ.23 (DaijiworldNews/PY): ಜನರ ಸಾಂಪ್ರದಾಯಿಕ ಆಹಾರ ಪದ್ದತಿಯಲ್ಲಿ ಪ್ರಮುಖವಾಗಿರುವ ಈರುಳ್ಳಿಯ ಬೆಲೆ ಈಗ ಜನಸಾಮಾನ್ಯರ ಕೈಗೆಟುಕದ ರೀತಿಯಲ್ಲಿ ಏರಿಕೆಯಾಗುತ್ತಿದ್ದು, ನಗರದಲ್ಲಿ ಕೆ.ಜಿಗೆ ನೂರ ಗಡಿ ದಾಟಿದೆ.
ಭಾರೀ ಮಳೆಯ ಪರಿಣಾಮ ಈರುಳ್ಳಿ ಬೆಳೆ ನಾಶವಾಗುತ್ತಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಈ ನಡುವೆ ರಾಜ್ಯದಲ್ಲಿಯೂ ಕೂಡಾ ಈರುಳ್ಳಿಯ ಬೆಲೆ ಗಗನಕ್ಕೇರುತ್ತಿದ್ದು, ಈರುಳ್ಳಿ ಬೆಲೆ ಕೇಳುವಾಗ ಕಣ್ಣಲ್ಲಿ ನೀರುಬರುವಂತಾಗಿದೆ.
ರಾಜ್ಯದಲ್ಲಿ ಸುರಿದ ಮಳೆಯ ಪರಿಣಾಮ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆಗಳು ನಾಶವಾಗಿದ್ದು, ಈರುಳ್ಳಿಯ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಸ್ತುತ, ಮಾರುಕಟ್ಟೆಯಲ್ಲಿ ಹಳೆಯ ಈರುಳ್ಳಿ ಮಾರಾಟಕ್ಕೆ ಇಡಲಾಗಿದ್ದು, ಮಳೆಯ ಪರಿಣಾಮ ಪ್ರಸ್ತುತ ಬೆಳೆ ನಾಶವಾಗಿದೆ. ಡಿಸೆಂಬರ್ನ ಸಮಯಕ್ಕೆ ಮಾರುಕಟ್ಟೆಯಲ್ಲಿ ತಾಜಾ ಈರುಳ್ಳಿ ಲಭ್ಯವಾಗಲಿದೆ. ಅಲ್ಲಿಯ ತನಕ ಈರುಳ್ಳಿಯ ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.