ಮಂಗಳೂರು, ಅ. 22 (DaijiworldNews/MB) : ಅಮಿತ ವೇಗದಲ್ಲಿ ಧಾವಿಸಿದ ಬೈಕ್ ಪಾದಚಾರಿಗೆ ಢಿಕ್ಕಿ ಹೊಡೆದು ರಸ್ತೆ ವಿಭಾಜಗಕ್ಕೆ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಘಟನೆಯಲ್ಲಿ ಬೈಕ್ ಹಿಂಬದಿ ಸವಾರ 17ರ ಹರೆಯದ ಯುವಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಬೈಕ್ ಸವಾರ ಮತ್ತು ಪಾದಚಾರಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು ಸಂಕೊಳಿಗೆ ಬಳಿ ಗುರುವಾರ ಸಂಜೆ ಸಂಭವಿಸಿದೆ.
ಮಂಜೇಶ್ವರ ಹೊಸಂಗಡಿ ಅಂಗಡಿಪದವಿನ ಅನಂತ ಗ್ಯಾಸ್ ಏಜೆನ್ಸಿ ಮಾಲಕ ಗೋಪಾಲ-ಶೋಭಾ ದಂಪತಿ ಪುತ್ರ ಪಿಯುಸಿ ವಿದ್ಯಾರ್ಥಿ ಅಶ್ವಿತ್(17) ಮೃತಪಟ್ಟಿದ್ದು, ಇನ್ನೋರ್ವ ಪುತ್ರ ಬೈಕ್ ಸವಾರ ಅಶ್ವಿನ್ (21) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾದಚಾರಿ ಹೆಸರು ತಿಳಿದುಬಂದಿಲ್ಲ. ಮಂಜೇಶ್ವರ ಕಡೆಯಿಂದ ಮಂಗಳೂರು ಕಡೆಗೆ ಅಮಿತ ವೇಗದಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ರಾ.ಹೆ. ದಾಟುತ್ತಿದ್ದ ಪಾದಚಾರಿಗೆ ಬೈಕ್ ಢಿಕ್ಕಿ ಹೊಡೆದಿದೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ರಸ್ತೆ ವಿಭಾಜಗಕ್ಕೆ ಢಿಕ್ಕಿ ಹೊಡೆದು ನಂತರ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಬೈಕ್ ಅಪ್ಪಳಿಸಿದೆ. ಘಟನಾ ಸ್ಥಳಕ್ಕೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.