Karavali
ಮಂಗಳೂರು: 'ಡಿಕೆಶಿಯವರನ್ನು ಕರ್ನಾಟಕದ ಮುಖ್ಯಮಂತ್ರಿಯಾಗಿ ನೋಡುವುದು ನನ್ನ ಗುರಿ' - ಮಿಥುನ್ ರೈ
- Thu, Oct 22 2020 03:49:23 PM
-
ಮಂಗಳೂರು, ಅ. 22 (DaijiworldNews/MB) : ದಾಯ್ಜಿವಲ್ಡ್ ಟಿವಿಯಲ್ಲಿ ಪ್ರಸಾರವಾಗುವ ರಫ್ ಎನ್ ರೈಟ್ ಕಾರ್ಯಕ್ರಮದ ವಿಶೇಷ ಸಂದರ್ಶನದಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು ಭಾಗಿಯಾಗಿದ್ದು " ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯಾಗಿ ನೋಡುವುದು ನನ್ನ ಗುರಿ" ಎಂದು ಹೇಳಿದ್ದಾರೆ.
ವಿವಾದಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕುರಿತಾಗಿ ಮಿಥುನ್ ರೈ ಅವರ ಹೇಳಿಕೆಯ ಬಗ್ಗೆ ಮಾತನಾಡಿದ ಮಿಥುನ್ಅವರು, "ಉತ್ತರ ಪ್ರದೇಶದ ಅತ್ಯಾಚಾರಕ್ಕೊಳಗಾದವರನ್ನು ಅಮಾನವೀಯವಾಗಿ ನೋಡಲಾಗಿದೆ. ಆಕೆಯು ಸಾಯುವ ಮೊದಲು ನೀಡಿದ ಹೇಳಿಕೆಯಲ್ಲಿ ಆರೋಪಿಗಳ ಹೆಸರನ್ನು ಸಹ ತಿಳಿಸಿದ್ದಾಳೆ. ಆದರೆ ಪೊಲೀಸರು ಸಾಕ್ಷ್ಯಗಳನ್ನು ನಾಶಮಾಡಿದರು. ಮುಂದಿನ ದಿನಗಳಲ್ಲಿ ನಾವು ಇದರ ವಿರುದ್ದವಾಗಿ ಖಂಡಿತವಾಗಿ ಮತ್ತಷ್ಟು ಹೋರಾಟಗಳನ್ನು ನಡೆಸುತ್ತೇವೆ" ಎಂದು ಹೇಳಿದರು.
ಸೌಜನ್ಯ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಅವರು ಹಾಗೂ ಕಾಂಗ್ರೆಸ್ ಎಲ್ಲಿತ್ತು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಿಥುನ್ ರೈ, "ನಾವು ಸೌಜನ್ಯ ಅತ್ಯಾಚಾರ ಪ್ರಕರಣದ ವಿರುದ್ದವಾಗಿಯೂ ಪ್ರತಿಭಟನೆ ನಡೆಸಿದ್ದೇವೆ. ಬಿಜೆಪಿ ನಾಯಕರು ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ಮತ್ತು ಕೇರಳದಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿಷಯವನ್ನು ಎತ್ತಿದರು. ಆದರೆ ಈ ಎರಡರಲ್ಲೂ ಸರ್ಕಾರ ನೇರವಾಗಿ ಶಾಮೀಲಾಗಿಲ್ಲ ಹಾಗೂ ಆರೋಪಿಗಳ ಪರ ನಿಂತಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಸಂತ್ರಸ್ತೆಗೆ ಕಿರುಕುಳ ನೀಡಿ ಅತ್ಯಾಚಾರ ಮಾಡಿ ಹತ್ಯೆಗೈಯಲಾಗಿದೆ. ಹಾಗೆಯೇ ಆಕೆಗೆ ಎಂಟು ದಿನಗಳವರೆಗೆ ಸರಿಯಾದ ಚಿಕಿತ್ಸೆ ನೀಡಿಲ್ಲ. ಹಿಂದುತ್ವವನ್ನು ಹಿಡಿದು ರಾಜಕೀಯಕ್ಕೆ ಪ್ರವೇಶಿಸಿರುವ ಬಿಜೆಪಿ ಈ ಮೂಲಕ ಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಯಾವ ಹಿಂದುತ್ವ ಶವಸಂಸ್ಕಾರವನ್ನು ರಾತ್ರಿಯಲ್ಲಿ ನಡೆಸಲು ಅನುಮತಿಸುತ್ತದೆ. ಅವರ ಮನೆಯವರಿಗೆ ಪಾರ್ಥಿವ ಶರೀರವನ್ನು ನೋಡಲು ಅವಕಾಶ ಮಾಡಿಕೊಡದೆ ಇರುವುದು ಸರಿಯೇ? ಆ ಹೆಣ್ಣುಮಗಳ ಅಂತಿಮ ಸಂಸ್ಕಾರವನ್ನು ಹಿಂದೂ ವಿಧಿ ವಿಧಾನವನ್ನು ಅನುಸರಿಸಿಲ್ಲ. ಶವದ ಮೇಲೆ ಕಟ್ಟಿಗೆ ಹಾಕಿ ಪೆಟ್ರೋಲ್ ಸುರಿದು ಅಂತಿಮ ಸಂಸ್ಕಾರ ಮಾಡಲಾಗಿದೆ. ಸಿಬಿಐನಲ್ಲಿ ನನಗೆ ನಂಬಿಕೆಯಿಲ್ಲ. 14 ದಿನಗಳವರೆಗೆ ಈ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸಲಾಗಿಲ್ಲ. ಅಧಿಕಾರಿಗಳು ಆರೋಪಿಗಳ ಹೆಸರನ್ನು ಬದಲಾಯಿಸಿದ್ದಾರೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಕುಟುಂಬಕ್ಕೆ ಬೆದರಿಕೆ ಹಾಕಿದರು. ಅಲ್ಲಿ ಕಾಂಗ್ರೆಸ್ ಮುಖಂಡರನ್ನು ಕೂಡಾ ಬಂಧಿಸಲಾಗಿದೆ" ಎಂದು ಹೇಳಿದರು.
ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಮಿಥುನ್ ಅವರು ಕಾನೂನನ್ನು ಗೌರವಿಸುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, , "ನಾನು ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಪಡೆದಿದ್ದೇನೆ. ಆದರೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಹಗರಣಗಳಲ್ಲಿ ತಪ್ಪಿತಸ್ಥರಾದ ಹಲವು ಬಿಜೆಪಿ ನಾಯಕರು ಇದ್ದಾರೆ. ಆದರೆ ಎಲ್ಲಾ ಏಜೆನ್ಸಿಗಳನ್ನು ಬಿಜೆಪಿಯವರು ತಮ್ಮ ಕೈಗೊಂಬೆಯನ್ನಾಗಿಸಿದ್ದಾರೆ. ಹಾಗಾಗಿ ಅವರು ತಪ್ಪಿಸಿಕೊಳ್ಳುತ್ತಾರೆ. ಡಿ.ಕೆ.ಶಿವಕುಮಾರ್ ಅವರನ್ನು ಮಾತ್ರ ಪೊಲೀಸರು ಗುರಿಯಾಗಿಸಿಕೊಂಡಿರುವುದು ಅಸಮಾಧಾನವನ್ನುಂಟುಮಾಡಿದೆ" ಎಂದು ಹೇಳಿದರು.
ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅವರ ವಿರುದ್ಧ ದಾಖಲಾದ ಪ್ರಕರಣಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬ ಕುರಿತು ಮಾತನಾಡಿದ ಅವರು, "ನಾನು ಯಾವುದೇ ತಪ್ಪು ಮಾತನಾಡಿಲ್ಲ. ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ವಿರುದ್ಧ ಧ್ವನಿ ಎತ್ತಿದ್ದೇನೆಯೇ ಹೊರತು ಜೋಗಿ ಸಮುದಾಯದ ವಿರುದ್ಧವಲ್ಲ. ಕಾವಿ ಪವಿತ್ರ ಉಡುಪಾಗಿದೆ. ಆದರೆ ಅದನ್ನು ಹಾಕಿಕೊಂಡು ರಾಜಕೀಯವನ್ನು ಪ್ರವೇಶಿಸಿದಾಗ, ಉಡುಪುಗೆ ಇರುವ ಪ್ರಾಮುಖ್ಯತೆ ಹೋಗುತ್ತದೆ. ಕಾವಿ ಧರಿಸಿ ರಾಜಕೀಯಕ್ಕೆ ಪ್ರವೇಶಿಸಿರುವ ಯೋಗಿ ಆದಿತ್ಯನಾಥ್ ಅವರು ಪ್ರತಿ ಟೀಕೆಗಳನ್ನು ಸ್ವೀಕರಿಸಬೇಕು. ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆದು ಮಠದಲ್ಲಿ ಬದುಕು ಸಾಗಿಸಲಿ ನನ್ನ ಉಸಿರು ಇರುವವರೆಗೂ ಪ್ರತಿ ತಿಂಗಳು ಹೋಗಿ ಅವರ ಪಾದ ಸ್ಪರ್ಶ ಮಾಡುತ್ತೇನೆ" ಎಂದು ಹೇಳಿದರು.
" ಕೇಸರಿ ಶಾಲು ಧರಿಸುವ ಬಿಜೆಪಿ ಪ್ರತಿನಿಧಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಹೆತ್ತವರನ್ನು ನಿಂದಿಸಿದ್ದಾರೆ. ಕುಟುಂಬಗಳನ್ನು ರಾಜಕೀಯಕ್ಕೆ ಎಳೆಯುವುದು ಸಂಪೂರ್ಣವಾಗಿ ತಪ್ಪು" ಎಂದರು.
ಈ ಸಂದರ್ಭದಲ್ಲೇ ಅವರ ಮುಂದಿನ ಗುರಿಯೇನು ಮೂಡುಬಿದಿರೆಯಾ ಅಥವಾ ಮಂಗಳೂರು ದಕ್ಷಿಣವೇ ಎಂದು ಕೇಳಿದಾಗ, "ಡಿ.ಕೆ.ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನೋಡುವುದು ನನ್ನ ಏಕೈಕ ಗುರಿಯಾಗಿದೆ. ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದರೆ ಸಂತೋಷ. ಚುನಾವಣೆಯಲ್ಲಿ ನಾನು ಸೋತ ನಂತರ ಹಲವಾರು ಅಂಶಗಳನ್ನು ವಿಮರ್ಶಿಸಿದ್ದೇನೆ. ನಾನು ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಲು ಕೆಲಸ ಮಾಡುತ್ತಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಲ್ಲಿ ಈವರೆಗೂ ಯಾರಿಗೂ 5 ಲಕ್ಷ ಮತ ಲಭಿಸಿರಲಿಕ್ಕಿಲ್ಲ. ನನಗೆ ಲಭಿಸಿದೆ. ಅದು ಜನರು ನಮ್ಮನ್ನು ನಂಬುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತದೆ. ನಾವು ಅಪಪ್ರಚಾರದ ಅಲೆಯಲ್ಲಿ ಸಿಲುಕಿ ಬಿದ್ದಿದ್ದೇವೆ ಎಂದು ಹೇಳಿದರು.
"ನಾವೆಲ್ಲರೂ ಮೋದಿ ಅಲೆಯ ನಡುವೆ ತಪ್ಪು ಮಾಹಿತಿಯ ಬಲಿಪಶುಗಳಾಗಿದ್ದೇವೆ. ಮೋದಿ ಹವಾದಲ್ಲಿ ತಪ್ಪು ಮಾಹಿತಿಗಳು ರವಾನೆಯಾಗುತ್ತಿದೆ" ಎಂದು ಹೇಳಿದರು.
'ರೋಡ್ ಚಾಲೆಂಜ್' ಬಗ್ಗೆ ಮಾತನಾಡಿದ ಅವರು, "ನಮ್ಮ ಜಿಲ್ಲೆಯ ಬರುವ ಜನರು ನನ್ನ ಹಿಡಿಶಾಪವನ್ನು ಹಾಕುವುದನ್ನು ಕೇಳಲು ನಾನು ಸಿದ್ದನಾಗಿಲ್ಲ. ರಸ್ತೆಗಳು ಚಿಂತಾಜನಕ ಪರಿಸ್ಥಿತಿಯಲ್ಲಿದೆ. ಗುಂಡಿಯಿಂದ ತುಂಬಿರುವ ರಸ್ತೆಯಿಂದಾಗಿ ಅಪಘಾತಗಳು ನಡೆಯುತ್ತದೆ. ಈ ರಸ್ತೆಯಿಂದಾಗಿ ಹಲವು ಜೀವಗಳು ಬಲಿಪಶುವಾಗಿದೆ. ಈ ನಿಟ್ಟಿನಲ್ಲಿ ಇದೊಂದು ಎಚ್ಚರಿಕೆ ತರುವ ಪ್ರಯತ್ನ. ಬಿಸಿರೋಡ್ನಲ್ಲಿ ಟೋಲ್ ಇದೆ. ಆದರೆ ಯಾವ ನೈತಿಕತೆಯಲ್ಲಿ ಅವರು ಟೋಲ್ ಸಂಗ್ರಹ ಮಾಡುತ್ತಾರೆ. ಅದು ಟೋಲ್ ಗೇಟಾ ಅಥವಾ ಜೂಜು ಅಡ್ಡವೋ ಎಂದು ತಿಳಿಯಲ್ಲ. ಆ ರೀತಿಯ ವ್ಯವಸ್ಥೆ ಈಗ ಇದೆ" ಎಂದು ಹೇಳಿದರು.