ಕಾಸರಗೋಡು,ಅ.22 (DaijiworldNews/HR): ಕಳವುಗೈದ ಶ್ರೀಗಂಧ ಮರದ ಕೊರಡುಗಳು ಎರಡು ದಿನಗಳ ಬಳಿಕ ಮಸೀದಿ ಆವರಣದಲ್ಲೇ ಪತ್ತೆಯಾದ ಘಟನೆ ಮುಳಿಯಾರಿನ ಬಾವಿಕ್ಕರೆ ಎಂಬಲ್ಲಿ ನಡೆದಿದೆ.
ಶ್ರೀಗಂಧ ಕಳವುಗೈದ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಂತೆ ಕಳ್ಳರು ಕೊರಡುಗಳನ್ನು ಆವರಣದಲ್ಲಿ ತಂದಿಟ್ಟು ಪರಾರಿಯಾಗಿದ್ದಾರೆ.
ಬಾವಿಕ್ಕರೆ ಜುಮಾ ಮಸೀದಿ ಆವರಣದಲ್ಲಿದ್ದ ಸುಮಾರು 16 ವರ್ಷ ಹಳೆಯ ಮರವನ್ನು ಎರಡು ದಿನಗಳ ಹಿಂದೆ ಕಳವು ಮಾಡಲಾಗಿತ್ತು.
ಆದಿತ್ಯವಾರ ಮಸೀದಿ ಪರಿಸರ ಸ್ವಚ್ಛಗೊಳಿಸಲಾಗಿದ್ದು, ಬಳಿಕ ಸೋಮವಾರ ಬೆಳಿಗ್ಗೆ ಗಮನಿಸಿದಾಗ ಶ್ರೀಗಂಧದ ಮರ ಕಳವು ಮಾಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲಾಗುತ್ತಿತ್ತು, ಈ ನಡುವೆ ಮಸೀದಿ ಆವರಣದಲ್ಲಿ ಗೋಣಿ ಚೀಲದಲ್ಲಿ ಶ್ರೀಗಂಧದ ಕೊರಡು ಪತ್ತೆಯಾಗಿದ್ದು, ಸುಮಾರು 18 ಕಿಲೋ ಶ್ರೀಗಂಧ ಪತ್ತೆಯಾಗಿದೆ.