ಮೂಡುಬಿದಿರೆ,ಅ. 16 (DaijiworldNews/HR): ವಿದ್ಯಾಗಮ ಯೋಜನೆಯಡಿ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದ ಮೂಡುಬಿದಿರೆ ಶಿಕ್ಷಕಿ ಪದ್ಮಾಕ್ಷಿಗೆ ಸೆ. 29ರಂದು ಕೊರೊನಾ ದೃಢಪಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಮೃತಪಟ್ಟಿದ್ದಾರೆ.
ಶಿಕ್ಷಕಿ ಪದ್ಮಾಕ್ಷಿಗೆ ಎರಡನೇ ಹಂತದ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು. ತಾಯಿಯ ಚಿಕಿತ್ಸೆಗೆ ಸಹಕರಿಸುವಂತೆ ಕೋರಿ ಪುತ್ರಿ ಐಶ್ವರ್ಯಾ ಫೇಸ್ ಬುಕ್ ನಲ್ಲಿ ಮಾಡಿಕೊಂಡ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದರು.
ಇನ್ನು ಶಿಕ್ಷಕಿಗೆ ಕೊರೊನಾ ನೆಗೆಟಿವ್ ಎಂದು ಕಂಡುಬಂದಿದ್ದರೂ ಅವರ ಆರೋಗ್ಯಸ್ಥಿತಿ ಚಿಂತಾಜನಕವಾದ ಕಾರಣ ಪತಿ ಶಶಿಕಾಂತ್ , ಪುತ್ರಿ ಐಶ್ವರ್ಯ ಅವರು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಎಕ್ಮೋ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮೂಲಕ ಬೆಂಗಳೂರು ಗೆ ಒಯ್ಯಲು ಸಿದ್ಧತೆ ನಡೆಸಿದ್ದರು.
ಮಾಜಿ ಸಚಿವ ಅಭಯಚಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜತೆ ಚರ್ಚಿಸಿ ಬಳಿಕ ಸಚಿವರು ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಪತ್ರಗಳನ್ನು ಸಿದ್ಧಪಡಿಸುತ್ತಿದ್ದಂತೆ ಪದ್ಮಾಕ್ಷಿ ಕೊನೆಯುಸಿರೆಳೆದರು ಎಂದು ಮಾಜಿ ಶಾಸಕ ಅಭಯಚಂದ್ರ ಜೈನ್ ಮಾಹಿತಿ ನೀಡಿದರು.