ಮಂಗಳೂರು, ಅ. 14 (DaijiworldNews/MB) : ಅಕ್ಟೋಬರ್ 17 ರಿಂದ ನಾಡ ಹಬ್ಬ ದಸರಾವನ್ನು ಆಚರಿಸಲಾಗುತ್ತಿದ್ದು ಈ ವರ್ಷ ಕೊರೊನಾ ಕಾರಣದಿಂದಾಗಿ ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ದುರ್ಗಾದೇವಿಯ ಆರಾಧನೆಯ ಪರ್ವಕಾಲವಾದ ನವರಾತ್ರಿಯ ಈ ಸಂಭ್ರಮಕ್ಕೆ ಇನ್ನೇನು ಕೆಲವು ದಿನಗಳು ಇರುವ ನಡುವೆ ಐದನೇ ವರ್ಷದ ವಿದ್ಯಾರ್ಥಿಯೋರ್ವರು ನವ ದುರ್ಗೆಯರ ಪೈಕಿ ದುರ್ಗೆ, ಶಾರದೆ, ಲಕ್ಷ್ಮಿ ಸ್ವರೂಪಿಯಾಗಿ ಕಂಗೊಳಿಸಿದ್ದಾರೆ.
ನೃತ್ಯವೆಂಬ ಆಕರ್ಷಕ ಕಲೆಯ ಪಯಣ ಆರಂಭಿಸಿರುವ ಪ್ರತಿಭಾವಂತೆಯಾದ ಚಾರ್ವಿ ಎಸ್ ದೇವಾಡಿಗ ಎಂಬ ಬಾಲಕಿ ದಸರಾ ಪ್ರಯುಕ್ತವಾಗಿ ದುರ್ಗೆ, ಶಾರದೆ, ಲಕ್ಷ್ಮಿ ದೇವಿ ಸ್ವರೂಪಿಯಾಗಿ ಕಾಣಿಸಿಕೊಂಡಿದ್ದಾರೆ.
2010 ರ ಸೆಪ್ಟೆಂಬರ್ 7 ರಂದು ಜನಿಸಿದ ಚಾರ್ವಿಯು ಸುರತ್ಕಲ್ ಬಳಿಯ ಮುಕ್ಕದ ವಿಜಯಲಕ್ಷ್ಮೀ ಹಾಗೂ ಸುಶೀಲ್ ಕುಮಾರ್ ದಂಪತಿಯ ಮುದ್ದಿನ ಮಗಳು. ಎನ್ಐಟಿಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿ.ಚಾರ್ವಿಗೆ ಶಾಸ್ತ್ರೀಯ ನೃತ್ಯದ ಆರಂಭಿಕ ಹಂತದ ತರಬೇತಿಯನ್ನು ನೃತ್ಯ ಶಿಕ್ಷಕರಾದ ಭಾರತಿ ಸುರೇಶ್ ಹಾಗೂ ಶಿವಾನಿ ಸುರತ್ಕಲ್ ಅವರು ನೀಡಿದ್ದು ನೃತ್ಯದಲ್ಲಿ ಅತೀವ ಆಸಕ್ತಿ ಇರುವ ಚಾರ್ವಿ ಬಳಿಕ ತಾನಾಗಿಯೇ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಕಲಿಕೆಯಲ್ಲಿ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದೆ ಇರುವ ಚಾರ್ವಿ ಶಾಲೆಯಲ್ಲಿ ಹಾಗೂ ಇತರ ಸಂಘ ಸಂಸ್ಥೆಗಳಿಂದಲೂ ಹಲವಾರು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಚಾರ್ವಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದು ಅದರಲ್ಲಿ ಸಕ್ರಿಯರಾಗಿದ್ದಾರೆ.
ಇದೀಗ ದಸರಾ ಪ್ರಯುಕ್ತವಾಗಿ ದುರ್ಗೆ, ಶಾರದೆ, ಲಕ್ಷ್ಮಿ ಸ್ವರೂಪಿಯಾಗಿ ಕಂಗೊಳಿಸಿರುವ ಚಾರ್ವಿಯ ಈ ಚಿತ್ರಗಳನ್ನು ಛಾಯಾಗ್ರಾಹಕ ಶಶಿ ಹಳೆಯಂಗಡಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ವಸ್ತ್ರಾಲಂಕಾರವನ್ನು ಉಷಾ ಅಮೀನ್ ಮಾಡಿದ್ದಾರೆ. ಹಾಗೆಯೇ ವಸ್ತ್ರ ಭೂಷಣಗಳ ವ್ಯವಸ್ಥೆಯನ್ನು ಲಲಿತ ಕಲಾ ಆರ್ಟ್ಸ್ನ ಧನ್ಪಾಲ್ ಮಂಗಳೂರು ಅವರು ಮಾಡಿದ್ದಾರೆ.